ಕ್ಷಿಪಣಿ ವೇಗಕ್ಕೆ ಸೆಡ್ಡು ಹೊಡೆಯುತ್ತಿರುವ ಜಾಗತಿಕ ಜನಸಂಖ್ಯೆ
ಲಂಡನ್: ಜಗತ್ತಿನ ಜನಸಂಖ್ಯೆ ಕ್ಷಿಪಣಿಗಿಂತ ವೇಗದ ಗತಿಯಲ್ಲಿ ಬೆಳೆಯುತ್ತಿದೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ.
ಮಹಿಳೆಯರಿಗೆ ಸಾಕಷ್ಟು ಶಿಕ್ಷಣ ಮತ್ತು ಆರೋಗ್ಯ ನೀಡದಿದ್ದಲ್ಲಿ 2050 ನೇ ಇಸವಿಯ ಹೊತ್ತಿಗೆ ಜಗತ್ತಿನ ಜನಸಂಖ್ಯೆ 10.9 ಬಿಲಿಯನ್ಗೇರುತ್ತದಂತೆ.
ಮಹಿಳೆಯರಿಗೆ ಪುರುಷರಷ್ಟೇ ಸ್ಥಾನಮಾನ ನೀಡಬೇಕು. ಆರೋಗ್ಯ ಮತ್ತು ಕುಟುಂಬದ ಬಗ್ಗೆ ಸೂಕ್ತ ಯೋಜನೆಗಳನ್ನು ರೂಪಿಸುವಂತೆ ಅವರಿಗೆ ತಿಳಿವಳಿಕೆ ನೀಡಬೇಕು. ಆ ಮೂಲಕ ಇನ್ನೈವತ್ತು ವರ್ಷದಲ್ಲಿ ಜನಸಂಖ್ಯೆ ಇದೇ ವೇಗದಲ್ಲಿ ಹೆಚ್ಚಾಗದಂತೆ ಹಿಡಿತದಲ್ಲಿಟ್ಟುಕೊಳ್ಳಬೇಕು ಎಂದು ವರದಿ ಸಲಹೆ ಮಾಡಿದೆ.
ಈಗ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದಲ್ಲಿ 6.1 ಬಿಲಿಯನ್ ಇರುವ ಜನಸಂಖ್ಯೆ 9.3ಕ್ಕೇರಿದರೆ, ಬಡತನದ ವಿರುದ್ಧದ ಹೋರಾಟ ಇನ್ನೂ ತೀವ್ರವಾಗಬೇಕಾಗುತ್ತದೆ. ಪ್ರಕೃತಿ ದೇವಿಗೆ ಸುಸ್ತಾಗುತ್ತದೆ. ಜನಸಂಖ್ಯೆ ಹೆಚ್ಚಾದರೆ ವಸ್ತುಗಳ ಗ್ರಹಿಕೆ ಹೆಚ್ಚಾಗುತ್ತದೆ. ಭೂಮಿ ಎಂಬ ಗ್ರಹದ ಸಮತೋಲನ ತಪ್ಪುತ್ತದೆ. ಮಣ್ಣಿನ ಗುಣ ಕೆಡುತ್ತದೆ. ನೀರು ಗಾಳಿ ಕಲುಷಿತವಾಗುತ್ತದೆ. ಹಿಮಾಲಯದ ಹಿಮರಾಶಿ, ಧ್ರುವ ಪ್ರದೇಶದ ಬರ್ಫ ಕರಗುತ್ತದೆ. ಪ್ರಕೃತಿ ಸಹಜತೆ ಕಳೆದುಕೊಂಡು ಮುನಿಸಿಕೊಳ್ಳುತ್ತದೆ ಎಂದು 2001ರ ವಿಶ್ವ ಜನಸಂಖ್ಯಾ ಸ್ಥಿತಿಗತಿಯ ವರದಿ ಹೇಳುತ್ತದೆ.
ಜಗತ್ತಿನಲ್ಲಿ ಅತಿ ಕಡಿಮೆ ಅಭಿವೃದ್ಧಿ ಹೊಂದಿದ 49 ರಾಷ್ಟ್ರಗಳು ಈಗಾಗಲೇ ಮಣ್ಣು ನೀರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಗುಡ್ಡೆ ಹಾಕಿಕೊಂಡು ಕೂತಿವೆ. ಆಹಾರವಿಲ್ಲದೆ ಜನರು ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿಕೊಂಡು ಸುಮ್ಮನಾಗಿದ್ದಾರೆ. ಜನ ಸಂಖ್ಯೆ ಮೂರು ಪಟ್ಟು ಹೆಚ್ಚಾದರೆ ಬದುಕಿನ ಗತಿಯೇನು ?
ಇನ್ನು ಇಪ್ಪತ್ತೆೈದು ವರ್ಷಗಳಲ್ಲಿ...
ಮುಂದಿನ ಇಪ್ಪತ್ತೆೈದು ವರ್ಷಗಳಲ್ಲಿಯೇ ವಿಶ್ವದಲ್ಲಿನ ಆಹಾರ ಉತ್ಪಾದನೆ ಡಬ್ಬಲ್ ಆಗಬೇಕಂತೆ. ಅದೂ ಆಹಾರ ಉತ್ಪಾದನೆಗಾಗಿ ಕೀಟ ನಾಶಕ, ರಾಸಾಯನಿಕ ಗೊಬ್ಬರಗಳನ್ನು ಇನ್ನು ಬಳಸಲಿಕ್ಕಿಲ್ಲ. ಯಾಕೆಂದರೆ ಈಗಾಗಲೇ ಈ ನಮೂನೆಯ ವಸ್ತುಗಳನ್ನು ಬಳಸಿ ಮಣ್ಣು ಸತ್ವವನ್ನೇ ಕಳೆದುಕೊಂಡಿದೆ. ಮತ್ತಷ್ಟು ಗೊಬ್ಬರ ಸುರಿದರೆ ಜೈವಿಕ ಸಮತೋಲನ ಕೆಟ್ಟುಹೋಗುತ್ತದೆ.
ಸೋ, ವಿಶ್ವ ಸಂಸ್ಥೆ ವರದಿ ಹೇಳುವುದು - ಮಹಿಳೆಯರಿಗೆ ಸಾಕಷ್ಟು ವಿದ್ಯೆ, ಬುದ್ಧಿ, ಆರೋಗ್ಯ ಕೊಡಬೇಕು. ಆಗ ಜಗತ್ತಿನ ಈ ಭೀಕರ ಸಮಸ್ಯೆ ಕಡಿಮೆಯಾಗುತ್ತದೆ ಅಂತ.
ಕುಸುರಿ: ಮೂರು ಹೆಣ್ಣಿದ್ದರೂ ಗಂಡು ಮಗುವಿಗಾಗಿ ಶ್ರಮಿಸುವ ಪುರುಷರಿಗೆ ಏನು ಮಾಡಬೇಕು ಎನ್ನುವ ಬಗ್ಗೆ ವರದಿಯಲ್ಲಿ ಚಕಾರ ಇಲ್ಲ.
(ಇನ್ಫೋ ವಾರ್ತೆ)