ಅಟಲ್ ಔತಣಕೂಟ:ಅನಿವಾಸಿ ಭಾರತೀಯ ಸಂಘಗಳ ಕೋಳಿಜಗಳ
ನ್ಯೂಯಾರ್ಕ್: ಪ್ರಧಾನಿ ವಾಜಪೇಯಿ ಅವರಿಗೋಸ್ಕರ ಶನಿವಾರ (ನ.10) ಆಯೋಜಿಸಿರುವ ಔತಣ ಕೂಟದ ಬಗ್ಗೆ ಅನಿವಾಸೀ ಭಾರತೀಯರ ಸಂಘಟನೆಗಳ ನಡುವೆ ಕೋಳಿ ಜಗಳ ಆರಂಭವಾಗಿದೆ.
ಸುಮಾರು ಎರಡು ಡಝನ್ಗೂ ಹೆಚ್ಚು ಸಂಘಟನೆಗಳು, ಬಿಜೆಪಿಯ ಓವರ್ಸೀಸ್ ಫ್ರೆಂಡ್ಸ್(ಓಎಫ್ಬಿಜೆಪಿ)ನ ಜೊತೆಗೆ ಔತಣದ ಸಹ ಪ್ರಾಯೋಜಕತ್ವ ವಹಿಸಿಕೊಂಡಿವೆ. ಆದರೆ ಈ ಡಝನುಗಟ್ಟಲೆ ಸಂಘಟನೆಗಳ ಆಗರದಿಂದ ಹೊರಗುಳಿದಿರುವ ಕೆಲ ಸಂಘಟನೆಗಳು ಬಿಜೆಪಿಯು ತನ್ನ ಬೆಂಬಲಿಗರೊಂದಿಗಷ್ಟೇ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಔತಣ ಕಾರ್ಯಕ್ರಮವನ್ನು ಹೈಜಾಕ್ ಮಾಡಿರುವುದಾಗಿ ದೂರುತ್ತಿವೆ.
ಬಿಜೆಪಿಯ ಈ ಕ್ರಮವನ್ನು ‘ಕಾರ್ಯಕ್ರಮದ ಹೈಜಾಕ್’ ಎಂದು ತೀವ್ರವಾಗಿ ಖಂಡಿಸಿದವರು ಇಂಡಿಯನ್ ನ್ಯಾಷನಲ್ ಓವರ್ಸೀಸ್ ಕಾಂಗ್ರೆಸ್ನ ಅಧ್ಯಕ್ಷ ಸುರಿಂದರ್ ಸಿಂಗ್ ಮಲ್ಹೋತ್ರಾ. ‘ವಾಜಪೇಯಿ ಭಾರತಕ್ಕೆ ಪ್ರಧಾನಿಯೇ ಅಥವಾ ಬಿಜೆಪಿಗೆ ಪ್ರಧಾನಿಯೇ ? ಹೀಗೆ ಮಾಡುವುದರಿಂದ ಅವರಿಗೇ ನಷ್ಟ ಹೊರತು ನಮಗಲ್ಲ ...’ ಎಂದ ಅವರು ಹೀಗಾಗಲು ಅವಕಾಶ ನೀಡಿರುವ ನ್ಯೂಯಾರ್ಕ್ ರಾಯಭಾರಿಯನ್ನೂ ದೂರಿದ್ದಾರೆ. ‘ಕಾರ್ಯಕ್ರಮ ಸೂತ್ರವನ್ನು ತಾನೇ ಕೈಗೆತ್ತಿಕೊಳ್ಳುವ ಬದಲು ಸಂಘಟನೆಗಳ ಗುಂಪಿಗೆ ಅವಕಾಶ ಯಾಕೆ ನೀಡಬೇಕು ?ಭಾರತದ ಯಾವುದೇ ನಾಯಕರು ಬಂದಾಗಲೂ ರಾಯಭಾರಿ ಕಚೇರಿಯೇ ಔತಣ ಅಥವಾ ರಿಸೆಪ್ಷನ್ ಕಾರ್ಯಕ್ರಮವನ್ನು ಆಯೋಜಿಸುತ್ತಿತ್ತು. ಈಗೇಕೆ ಹೊಸ ಕ್ರಮ ?’
ಈ ಮಾತಿಗೆ ರಾಯಭಾರಿ ಕಚೇರಿ ತನ್ನದೇನೂ ತಪ್ಪಿಲ್ಲ ಎಂದಿದೆ. ಯಾಕೆಂದರೆ ಮೊದಲು ವಾಜಪೇಯಿ ಭೇಟಿ ನೀಡುವುದು ವಾಷಿಂಗ್ಟನ್ಗೆ. ಅಲ್ಲಿನ ರಾಯಭಾರ ಕಚೇರಿ ಪ್ರಧಾನಿಗೋಸ್ಕರ ಔತಣವನ್ನು ಈಗಾಗಲೇ ಆಯೋಜಿಸಿದೆ. ಒಂದುವೇಳೆ ಪ್ರಧಾನಿ ನ್ಯೂಯಾರ್ಕ್ಗೆ ಮೊದಲು ಭೇಟಿ ನೀಡಿದ್ದಲ್ಲಿ ಆಗ ಔತಣ ಏರ್ಪಡಿಸುವ ಜವಾಬ್ದಾರಿ ನ್ಯೂಯಾರ್ಕ್ ರಾಯಭಾರ ಕಚೇರಿಯದಾಗುತ್ತಿತ್ತು.
(ಪಿಟಿಐ)