ಒತ್ತಾಯಕ್ಕೆ ಮಣಿದ ಸರ್ಕಾರ ; ಗ್ರಾಮೀಣ ಪ್ರದೇಶಕ್ಕೆ ಹೆಚ್ಚು ವಿದ್ಯುತ್
ಬೆಂಗಳೂರು: ಸಾರ್ವಜನಿಕರ ಒತ್ತಾಯಕ್ಕೆ ಮಣಿದಿರುವ ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶಗಳಲ್ಲಿ ಹೇರಿದ್ದ 14 ಗಂಟೆಗಳ ಲೋಡ್ ಷೆಡ್ಡಿಂಗ್ ಜಾರಿ ಆದೇಶವನ್ನು ಮಾರ್ಪಡಿಸಲು ಮುಂದಾಗಿದ್ದು , ಕೃಷಿ ಪಂಪ್ಸೆಟ್ಗಳಿಗೆ ಸತತ 6 ಗಂಟೆಗಳ ಕಾಲ ವಿದ್ಯುತ್ ಪೂರೈಸಲು ಒಪ್ಪಿಕೊಂಡಿದೆ.
6 ಗಂಟೆಗಳ ಕಾಲ ತ್ರೀ ಫೇಸ್ ವಿದ್ಯುತ್ ಸರಬರಾಜು ಹಾಗೂ ಸಂಜೆ 6 ರಿಂದ ಮುಂಜಾನೆ 6 ಗಂಟೆವರೆಗೆ ಸಿಂಗಲ್ ಫೇಸ್ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಮಂಗಳವಾರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡುತ್ತಿದ್ದ ಇಂಧನ ಖಾತೆ ರಾಜ್ಯ ಸಚಿವ ವೀರಕುಮಾರ್ ಪಾಟೀಲ್ ಹೇಳಿದರು.
ಸದ್ಯದಲ್ಲಿ ಯಾವುದೇ ವಿದ್ಯುತ್ ಕಡಿತ ಹೇರುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ . ನೆರೆಯ ತಮಿಳುನಾಡು, ಕೇರಳ ಹಾಗೂ ಮಹಾರಾಷ್ಟ್ರಗಳಿಂದ ವಿದ್ಯುತ್ ಪಡೆಯಲು ಪ್ರಯತ್ನಿಸಲಾಗುತ್ತಿದೆ. ಅಕ್ಟೋಬರ್ 18 ರಿಂದ ಚತ್ತೀಸ್ಗಢ್ನಿಂದ 100 ಮೆಗಾವ್ಯಾಟ್ ವಿದ್ಯುತ್ ಪಡೆಯಲಾಗುತ್ತಿದೆ ಎಂದು ವೀರಕುಮಾರ್ ಹೇಳಿದರು.
ವಿದ್ಯುತ್ ಪಡೆಯಲು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್) 3800 ಕೋಟಿ ರುಪಾಯಿಗಳನ್ನು ಖರ್ಚು ಮಾಡಿದ್ದು , ಪ್ರಸಕ್ತ ವರ್ಷದಲ್ಲಿ ಇನ್ನೂ 1200 ಕೋಟಿ ರುಪಾಯಿ ಬೇಕಾಗಿದೆ ಎಂದು ಅಂದಾಜು ಮಾಡಲಾಗಿದೆ. ಕೆಪಿಟಿಸಿಎಲ್ ಬೆಂಬಲಿಸುವ ಉದ್ದೇಶದಿಂದ ವಿದ್ಯುತ್ ಖರೀದಿಸಲು 1200 ಕೋಟಿ ರುಪಾಯಿಗಳನ್ನು ಮುಂಗಡವಾಗಿ ನೀಡಲು ಸರ್ಕಾರ ಉದ್ದೇಶಿಸಿದೆ ಎಂದು ಸಚಿವರು ತಿಳಿಸಿದರು.
(ಪಿಟಿಐ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...