ನಾಗರಿಕ ಶಾಂತಿಗೆ ಧಾರ್ಮಿಕ ಭಯೋತ್ಪಾದಕತೆ ಕಂಟಕ- ವಾಜಪೇಯಿ
ಸೇಂಟ್ಸ್ ಪೀಟರ್ಸ್ಬರ್ಗ್: ಹೊಸ ಶತಮಾನದಲ್ಲಿ ನಾಗರಿಕ ಜಗತ್ತಿನ ಸುಭದ್ರತೆ ಹಾಗೂ ಶಾಂತಿಯನ್ನು ಧಾರ್ಮಿಕ ಭಯೋತ್ಪಾದಕತೆ ಕದಡುತ್ತಿದೆ ಎಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಭಿಪ್ರಾಯಪಟ್ಟಿದ್ದಾರೆ.
ತಮ್ಮ ತ್ರಿರಾಷ್ಟ್ರ ಪ್ರವಾಸದ ಎರಡನೇ ದಿನವಾದ ಸೋಮವಾರ, ರಷ್ಯನ್ ಬುದ್ಧಿಜೀವಿಗಳು ಹಾಗೂ ತತ್ವಜ್ಞಾನಿಗಳ ಸಮೂಹವನ್ನುದ್ದೇಶಿ ವಾಜಪೇಯಿ ಮಾತನಾಡುತ್ತಿದ್ದರು. ಸೆಪ್ಟಂಬರ್ 11 ರಂದು ಅಮೆರಿಕ ಮೇಲೆ ನಡೆದ ದಾಳಿ ಭಯೋತ್ಪಾದಕತೆಯ ಪೈಶಾಚಿಕ ಮುಖವನ್ನು ಬಯಲು ಮಾಡಿದೆ ಎಂದು ಅವರು ಹೇಳಿದರು.
ರಷ್ಯಾ ಕೂಡ ಭಯೋತ್ಪಾದನೆಯ ಕಾಕಸ್ನಿಂದ ಪೀಡನೆಗೊಳಗಾಗಿದ್ದು , ಕಳೆದೊಂದು ದಶಕದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ ಇಂಥದ್ದೇ ಸಮಸ್ಯೆಯನ್ನು ಅನುಭವಿಸಿದೆ. ಅಂತರರಾಷ್ಟ್ರೀಯ ಭಯೋತ್ಪಾದಕತೆಯ ವಿರುದ್ಧದ ಹೋರಾಟದಲ್ಲಿ ಬುದ್ಧಿಜೀವಿಗಳು ಮತ್ತು ಕಲಾವಿದರ ಪಾತ್ರ ಬಹಳ ದೊಡ್ಡದು. ಬುದ್ಧಿಜೀವಿಗಳು, ಶಿಕ್ಷಕರು ಹಾಗೂ ಇನ್ನಿತರೆ ಚಿಂತಕರ ಯೋಚನೆಗಳಿಂದ ಪ್ರಪಂಚದ ಆಡಳಿತ ಸಾಗಿ ಬಂದಿರುವುದು ಚಾರಿತ್ರಿಕ ಸತ್ಯವಾಗಿದೆ ಎಂದು ವಾಜಪೇಯಿ ಹೇಳಿದರು.
(ಪಿಟಿಐ)












Click it and Unblock the Notifications