ಕನ್ನಡಿಗರೆದೆಯಲ್ಲಿ ಮೊಳಗದ ಕನ್ನಡ ಡಿಂಡಿಮ- ಶಿವಮೊಗ್ಗ ಸುಬ್ಬಣ್ಣ
ಚಿಂತಾಮಣಿ : ಭಾಷಾವಾರು ಪ್ರಾಂತ್ಯಗಳ ವಿಂಗಡನೆ ನಂತರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಎಲ್ಲ ಸರ್ಕಾರಗಳು ಕನ್ನಡದ ಬಗ್ಗೆ ನಿರ್ಲಕ್ಷ್ಯ ತೋರಿವೆ ಎಂದು ಖ್ಯಾತ ಸುಗಮ ಸಂಗೀತ ಗಾಯಕ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ಗಾಯಕ ಶಿವಮೊಗ್ಗ ಸುಬ್ಬಣ್ಣ ಆರೋಪಿಸಿದ್ದಾರೆ.
ಪ್ರಸಿದ್ಧ ಕೊರಿಯರ್ ಸಂಸ್ಥೆ ಡಿಟಿಡಿಸಿ ಭಾನುವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಇತ್ತೀಚಿನ ದಿನಗಳಲ್ಲಿ ಕನ್ನಡಿಗರಲ್ಲಿ ಭಾಷಾಭಿಮಾನ ಕಡಿಮೆಯಾಗುತ್ತಿದೆ. ಕನ್ನಡ ಮಾಧ್ಯಮದ ಬಗೆಗೆ ಅಭಿಮಾನ ನಶಿಸಿ, ಆಂಗ್ಲಭಾಷಾ ವ್ಯಾಮೋಹ ಬಲಿಯುತ್ತಿದೆ ಎಂದು ವಿಷಾದಿಸಿದರು.
ವಿಜಯನಗರ ಸಾಮ್ರಾಜ್ಯದ ಪತನ ಹಾಗೂ ಟಿಪ್ಪೂ ಸುಲ್ತಾನ್ ಸಾವಿನ ನಂತರ ಕರ್ನಾಟಕ ಛಿದ್ರಗೊಂಡಿದ್ದರಿಂದ ಕನ್ನಡದ ಬೆಳವಣಿಗೆ ಕುಂಠಿತಗೊಂಡಿತು ಎಂದ ಸುಬ್ಬಣ್ಣ, ಪ್ರಸ್ತುತ ಆಡಳಿತದ ಎಲ್ಲ ಹಂತಗಳಲ್ಲಿ ಕನ್ನಡ ಜಾರಿಯಾಗಿರುವುದರಿಂದ ಜನ ಸಾಮಾನ್ಯರ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ ಎಂದರು.
ನಾನು ಬೆಂಗಾಳಿ, ನನ್ನ ಮಕ್ಕಳ ಮಾತೃಭಾಷೆ ಕನ್ನಡ
ಜೀವನೋಪಾಯಕ್ಕಾಗಿ ನಾನು ಬಂಗಾಳದಿಂದ ಕರ್ನಾಟಕಕ್ಕೆ ಬಂದವ. ಆದರೆ, ನನ್ನ ಮಕ್ಕಳ ಮಾತೃಭಾಷೆ ಕನ್ನಡ ಎಂದು ಸಂಸ್ಥೆಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಶುಭಾಕ್ಷಿಸ್ ಚಕ್ರವರ್ತಿ ಹೇಳಿದರು. ಇನ್ನುಮುಂದೆ ಪ್ರತಿವರ್ಷ ಡಿಟಿಡಿಸಿ ಸಂಸ್ಥೆ ರಾಜ್ಯೋತ್ಸವ ಆಚರಿಸುತ್ತದೆ ಹಾಗೂ ಸಂಸ್ಥೆಯ ಸಿಬ್ಬಂದಿಗೆ ಕನ್ನಡ ಕಲಿಯಲು ಪ್ರೋತ್ಸಾಹಿಸಲಾಗುವುದು ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ 470 ಬಡ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ವಿತರಿಸಲಾಯಿತು.
(ಇನ್ಫೋ ವಾರ್ತೆ)