ಈ ಹೊತ್ತು ಹಂಪೆಯಲ್ಲಿ ‘ಹಂಪಿ ಉತ್ಸವ 2001’ರ ಸಂಭ್ರಮ
ಹಂಪೆ: ಶನಿವಾರದಿಂದ ವಿಶ್ವವಿಖ್ಯಾತ ಹಂಪಿಯಲ್ಲಿ, ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಸಾರುವ ಮೂರು ದಿನಗಳ ಹಂಪಿ ಉತ್ಸವ 2001ಜರುಗಲಿದೆ. ಈ ಮುನ್ನ ಮುಂಗಾರು ವೈಫಲ್ಯದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಈ ಉತ್ಸವನ್ನು ರದ್ದುಪಡಿಸಿತ್ತು. ಆದರೆ, ಹಿಂಗಾರು ಮಳೆ ಬಲಗೊಂಡಿದ್ದರಿಂದ ಉತ್ಸವಕ್ಕೆ ಮರು ಚಾಲನೆ ದೊರೆತಿದೆ.
ಆದಾಗ್ಯೂ ರಾಜ್ಯ ಬರದಿಂದ ತತ್ತರಿಸಿರುವ ಹಿನ್ನೆಲೆಯಲ್ಲಿ ಈ ಸಾಲಿನ ಉತ್ಸವವನ್ನು ಸಾಂಕೇತಕವಾಗಿ ಹಾಗೂ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ಉತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಇದಕ್ಕಾಗಿ ಜಿಲ್ಲಾಡಳಿತ ರಾಜ್ಯದ ವಿವಿಧ ಮೂಲೆಗಳಿಂದ ಕಲಾ ತಂಡಗಳನ್ನು ಹಂಪಿಗೆ ಕರೆಸಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ನಡೆಯುತ್ತಿರುವ ಮೂರು ದಿನಗಳ ಈ ಉತ್ಸವ ನವೆಂಬರ್ ಮೂರರಂದು ಸಮಾರೋಪಗೊಳ್ಳಲಿದೆ. ಮೂರು ದಿನಗಳ ಈ ಕಾರ್ಯಕ್ರಮದಲ್ಲಿ ಸಚಿವ ಎಂ.ವೈ. ಘೋರ್ಪಡೆ, ವಿರೂಪಾಕ್ಷ ವಿದ್ಯಾರಣ್ಯ ಮಠದ ಪೀಠಾಧಿಪತಿ ಶ್ರೀವಿದ್ಯಾರಣ್ಯ ಭಾರತೀ ಸ್ವಾಮೀಜಿ, ಭಾಗೀರತಿ ಮರುಳಸಿದ್ಧನ ಗೌಡ, ಎನ್. ಹಾಲಪ್ಪ, ಎಂ.ಪಿ. ಪ್ರಕಾಶ್, ಡಾ. ಡಿ.ಕೆ. ಲಕ್ಕಪ್ಪಗೌಡ, ಎಚ್.ಜಿ. ರಾಮುಲು ಮೊದಲಾದವರು ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...