ಧ್ವನಿವರ್ಧಕದ ಅಬ್ಬರ ತಂದ ಜಗಳ : ಹರಿಹರ ಉದ್ವಿಗ್ನ
ದಾವಣಗೆರೆ : ರಾಜ್ಯೋತ್ಸವ ಕಾರ್ಯಕ್ರಮ ಹಾಗೂ ಪ್ರಾರ್ಥನಾ ಮಂದಿರದಲ್ಲಿ ಅಬ್ಬರದಿಂದ ಧ್ವನಿವರ್ಧಕ ಹಾಕಿದ ಘಟನೆಗೆ ಸಂಬಂಧಿಸಿದಂತೆ ಹರಿಹರದಲ್ಲಿ ನಡೆದ ಗುಂಪು ಘರ್ಷಣೆಯಲ್ಲಿ 7 ಜನರು ಗಾಯಗೊಂಡಿದ್ದಾರೆ. ಧ್ವನಿವರ್ಧಕದ ವಿಚಾರದಲ್ಲಿ ಗುರುವಾರ ಆರಂಭವಾದ ಸಣ್ಣ ಜಗಳ ಶುಕ್ರವಾರ ರಾತ್ರಿ ಗುಂಪು ಘರ್ಣಣೆಗೆ ತಿರುಗಿ, ಉದ್ವಿಗ್ನ ವಾತಾವರಣ ಸೃಷ್ಟಿಯಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಧ್ವನಿವರ್ಧಕ ಹಾಕಿದ್ದಕ್ಕೆ ಅಡ್ಡಿಪಡಿಸಿದ ಕೆಲವು ದುಷ್ಕರ್ಮಿಗಳ ನಡೆವಳಿಕೆಯಿಂದ ಪಟ್ಟಣದಲ್ಲಿ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಸ್ಥಳೀಯ ಪೊಲೀಸರ ಕ್ಷಿಪ್ರ ಕ್ರಮದಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿತು ಎಂದು ಜಿಲ್ಲಾ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಾಳುಗಳನ್ನು ಹರಿಹರದ ಆಸ್ಪತ್ರೆಗೆ ಸೇರಿಸಲಾಗಿದೆ. ಪರಿಸ್ಥಿತಿ ಪ್ರಕೋಪಕ್ಕೆ ಹೋಗದಂತೆ ತಡೆಯಲು ದಾವಣಗೆರೆಯಿಂದ ಹೆಚ್ಚುವರಿ ಪೊಲೀಸ್ ತುಕಡಿಯನ್ನು ಕಳುಹಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುನಿಲ್ ಅಗರ್ವಾಲ್, ಡಿವೈಎಸ್ಪಿ ಬಸವರಾಜಪ್ಪ ಹರಿಹರದಲ್ಲಿ ಮೊಕ್ಕಾಂ ಹೂಡಿದ್ದು, ಬಿಗಿ ಬಂದೋಬಸ್ತ್ಗೆ ಆದೇಶಿಸಿದ್ದಾರೆ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ.
(ಪಿ.ಟಿ.ಐ/ಇನ್ಫೋ ವಾರ್ತೆ)