ಗುಲ್ಬರ್ಗಾದಲ್ಲಿ ಪ್ರತ್ಯೇಕತೆ ಕೂಗು: ಹೈ-ಕರ್ನಾಟಕ ರಾಜ್ಯ ಧ್ವಜಾರೋಹಣ
ಗುಲ್ಬರ್ಗಾ : ಹೈಕೋರ್ಟ್ ಪೀಠ ಸ್ಥಾಪನೆ ಹೋರಾಟ ಸಂದರ್ಭದಲ್ಲೇ ಬುಗಿಲೆದ್ದಿದ್ದ ಪ್ರತ್ಯೇಕ ಹೈದರಾಬಾದ್ ಕರ್ನಾಟಕ ರಾಜ್ಯ ಸ್ಥಾಪನೆ ಹೋರಾಟಕ್ಕೆ ರಾಜ್ಯೋತ್ಸವ ದಿನದಿಂದ ಮತ್ತೆ ತೀವ್ರ ಚಾಲನೆ ದೊರೆತಿದೆ. ಗುಲ್ಬರ್ಗಾ, ಬೀದರ್, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿಗಳನ್ನೊಳಗೊಂಡ ಹೈದರಾಬಾದ್ ಕರ್ನಾಟಕ ರಾಜ್ಯ ರಚನೆಗೆ ಒತ್ತಾಯ ಕೇಳಿಬಂದಿದೆ.
ಈ ಸಂಬಂಧ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಹೋರಾಟ ಮಂಡಳಿ ಗುರುವಾರ ಗುಲ್ಬರ್ಗಾದಲ್ಲಿ ಮೇಲ್ಕಂಡ ಐದು ಜಿಲ್ಲೆಗಳನ್ನೊಳಗೊಂಡ ಹೊಸ ನಕಾಶೆಯನ್ನು ಬಿಡುಗಡೆ ಮಾಡಿದ್ದಲ್ಲದೆ, ಹಿಂದಿ ಪ್ರಚಾರ ಸಭಾ ಅವರಣದಲ್ಲಿ ಕೆಂಪುವರ್ಣದ ಹೈದರಾಬಾದ್ ಕರ್ನಾಟಕ ರಾಜ್ಯ ಧ್ವಜವನ್ನೂ ಹಾರಿಸಿತು.
ಧ್ವಜಾರೋಹಣ ಮಾಡಿದ ಹೋರಾಟ ಸಮಿತಿಯ ಕಾರ್ಯಾಧ್ಯಕ್ಷ ವೈಜನಾಥ ಪಾಟೀಲ್ ಅವರು, ಪ್ರತ್ಯೇಕ ರಾಜ್ಯ ಹೋರಾಟಕ್ಕೆ ಇಂದು ನಾಂದಿ ಹಾಡಲಾಗಿದ್ದು, ಹೋರಾಟವನ್ನು ತೀವ್ರಗೊಳಿಸುವುದಾಗಿ ಪ್ರಕಟಿಸಿದರು. ಶಿಕ್ಷಣ, ವೈದ್ಯಕೀಯ, ಉದ್ಯೋಗ ಹೀಗೆ ಅಭಿವೃದ್ಧಿಯ ಎಲ್ಲ ವಲಯಗಳಲ್ಲಿ ರಾಜ್ಯ ಸರಕಾರದಿಂದ ಹೈದರಾಬಾದ್ ಕರ್ನಾಟಕ ಪ್ರದೇಶ ಕಡೆಗಣಿಸಲ್ಪಟ್ಟಿದೆ.
ಈ ಪ್ರದೇಶದ ಸಮಗ್ರ ಅಭಿವೃದ್ಧಿ ಆಗಬೇಕಾದರೆ, ಪ್ರತ್ಯೇಕ ರಾಜ್ಯ ಸ್ಥಾಪನೆಯಾಂದೇ ಮಾರ್ಗ ಎಂದು ಘೋಷಿಸಿದರು. ತಮ್ಮ ಹೋರಾಟಕ್ಕೆ ಯಾರೇ ವಿರೋಧ ವ್ಯಕ್ತಪಡಿಸಿದರೂ, ಹೋರಾಟ ನಿಲ್ಲದು, ನಾವು ಹಳ್ಳಿ ಹಳ್ಳಿಗೂ ಹೋಗಿ ವಾಸ್ತವ ಸ್ಥಿತಿ ತಿಳಿಸಿ, ಹೋರಾಟ ತೀವ್ರಗೊಳಿಸುವುದಾಗಿ ಅವರು, ಹೇಳಿದರು.
ಸಮಾರಂಭದಲ್ಲಿ ಮಾಜಿ ಶಾಸಕ ಹಣಮಂತರಾವ್ ದೇಸಾಯಿ, ವಿಶ್ವನಾಥರೆಡ್ಡಿ ಮುದ್ನಾಳ್, ಸಮತಾ ಪಕ್ಷದ ಬಸವರಾಜ ಇಂಗಿನ್, ಕೇದಾರಲಿಂಗಯ್ಯ ಹಿರೇಮಠ ಮೊದಲಾದವರು ಹಾಜರಿದ್ದರು. ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಜನತೆ ಹೋರಾಟಕ್ಕೆ ಬೆಂಬಲ ಸೂಚಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...