Get Updates
Get notified of breaking news, exclusive insights, and must-see stories!

ತೆರೆಯಿತಿದೋ ಐಟಿ ಜಾತ್ರೆ ಕಂಪ್ಯೂಟರ್‌ ಕಂಪನಿಗಳ ವರುಷದ ಯಾತ್ರೆ

(ನಮ್ಮ ಪ್ರತಿನಿಧಿಯಿಂದ)

ಬೆಂಗಳೂರು : ಇದು ಜಾತ್ರೆ. ಇಂಟೆಲ್‌ ಹೆಸರು ಹೊತ್ತ ಬಲೂನುಗಳು. ಚಿಣ್ಣ- ಪೋರರ ಚಿಳಿಪಿಳಿ ಸದ್ದು. ಎಂಥದೋ ಸಾಫ್ಟ್‌ವೇರ್‌, ಚಿಪ್‌ ವಿಷಯಗಳೇ ಗಾಳಿಯಲ್ಲಿ . ಬೆಂಗಳೂರು ಅರಮನೆ ಆವರಣದಲ್ಲಿ ರಾಜ್ಯೋತ್ಸವದ ದಿನ ಕನ್ನಡ ಬಾವುಟ ಕಾಣದಿದ್ದರೂ ಅಲ್ಲೊಂದು ಹೈಟೆಕ ಜಾತ್ರೆ. ಕಂಪ್ಯೂಟರ್‌ ಕಂಪನಿಗಳ ಯಾತ್ರೆ. ಬೆಂಗಳೂರುಐಟಿ ಡಾಟ್‌ ಕಾಂ 2001 ಪ್ರಾರಂಭವಾಗಿದೆ. ನವೆಂಬರ್‌ 5ರವರೆಗೆ ಈ ನಿಗಿನಿಗಿ ಜಾತ್ರೆ ಹೀಗೇ ಇರುತ್ತೆ.

ಇನ್ನೂರೈವತ್ತು ಕಂಪನಿಗಳು. ಇದರಲ್ಲಿ 70 ಯೂರೋಪಿನವು. 400ಕ್ಕೂ ಹೆಚ್ಚು ಉದ್ಯಮಾತಿಥಿಗಳು. 15 ವಿದೇಶಗಳ ಕಂಪನಿ, ಅತಿಥಿಗಳೂ ಇದರಲ್ಲುಂಟು. ಆರ್ಥಿಕ ಹಿನ್ನಡೆಯ ಈ ಹೊತ್ತಿನಲ್ಲಿ ಕೊಡವಿ ಎದ್ದು ನಿಲುವುದು ಹೇಗೆಂಬುದೇ ಚರ್ಚೆಯ ಸಂಕ್ಷಿಪ್ತ ಸಾರ. ಐಟಿ ಕ್ಷೇತ್ರದ ಪುನರ್ವಿಮರ್ಶೆ. ಭವಿತವ್ಯಕ್ಕೆ ಹೊಸ ಸೋಪಾನಗಳ ಕಟ್ಟುವಿಕೆ. ಮಿಗಿಲಾಗಿ ಬಂಡವಾಳ ಕೊಡು- ಕೊಳ್ಳುವಿಕೆ. ಇದೇ ಜಾತ್ರೆಯ ಗುರಿ.

ಇಂಗ್ಲೆಂಡಿನ ಮೂವತ್ತನಾಲ್ಕರ ಹರೆಯದ ಇ- ವಾಣಿಜ್ಯ ಸಚಿವ ಡಾ। ಡೌಗ್ಲಾಸ್‌ ಅಲೆಗ್ಸಾಂಡರ್‌ ದೀಪ ಹಚ್ಚುವ ಮೂಲಕ ಮೇಳವನ್ನು ಉದ್ಘಾಟಿಸಿದರು. ನಂತರ ಮಾತನಾಡಿ ಭಾರತವನ್ನು ಕೊಂಡಾಡಿದರು. ಇನ್ನೂ ಹೆಚ್ಚು ಕಂಪನಿಗಳನ್ನು ಇಂಗ್ಲೆಂಡಿಗೆ ಬನ್ನಿ ಅಂತ ಕರೆದರು. ಈಗಾಗಲೇ 100ಕ್ಕೂ ಹೆಚ್ಚು ಭಾರತೀಯ ಐಟಿ ಕಂಪನಿಗಳು ತಮ್ಮ ದೇಶದಲ್ಲಿರುವುದಾಗಿ ಹೇಳಿದ ಅವರು, ಆರ್ಥಿಕ ಹಿನ್ನಡೆಯ ಈ ಹೊತ್ತಲ್ಲೂ ಅದನ್ನು ಮೀರಿ ವಹಿವಾಟು ನಡೆಸುವ ಮಟ್ಟಕ್ಕೆ ಬೆಳೆಯಲು ನಾವು ಕೈಜೋಡಿಸಬೇಕು ಎಂದರು.

ಮೇಳದಲ್ಲಿ ಉದುರಿದ ಇನ್ನಷ್ಟು ಮಾತು- ಮುತ್ತುಗಳು....

1. ಮಾಹಿತಿ ತಂತ್ರಜ್ಞಾನದ ಉದ್ಯೋಗಾವಕಾಶದ ವ್ಯಾಪ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಅದರ ಶಿಕ್ಷಣದಲ್ಲಿ ಸುಧಾರಣೆ ತರುವ ಕುರಿತು ಶಿಕ್ಷಣ ಸಚಿವ ಜಿ.ಪರಮೇಶ್ವರ್‌ ಅವರ ಜೊತೆ ಚರ್ಚಿಸಿದ್ದೇನೆ. ಐಟಿಯಿಂದ ಇ- ಆಡಳಿತ, ಬಡತನ ನಿರ್ಮೂಲನೆ, ಉದ್ಯೋಗಾವಕಾಶಗಳ ಹೆಚ್ಚಳದ ಬಗೆಗೆ ರಾಜ್ಯ ಸರ್ಕಾರಕ್ಕೆ ಕಾಳಜಿ ಇದೆ- ಮಾಹಿತಿ ತಂತ್ರಜ್ಞಾನ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್‌.

2. ಮಾಹಿತಿ ತಂತ್ರಜ್ಞಾನ ಆಧಾರಿತ ಸೇವೆಗಳಿಗೆ ಹಣ ಇಂದಿಗೂ ಹರಿದುಬರುತ್ತಿದೆ. ರಾಜ್ಯಾದ್ಯಂತ ಕಾಲ್‌ ಸೆಂಟರ್‌ಗಳನ್ನು ಸ್ಥಾಪಿಸಿ 10ರಿಂದ 15 ಸಾವಿರ ಉದ್ಯೋಗ ಸೃಷ್ಟಿಸಲಾಗುವುದು- ಕರ್ನಾಟಕದ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ

3.ಹಿನ್ನಡೆಯ ಈ ಹೊತ್ತಿನಲ್ಲೂ ಭಾರತ ಪ್ರಸಕ್ತ ವಿತ್ತ ವರ್ಷದಲ್ಲಿ ಐಟಿ ಕ್ಷೇತ್ರದಲ್ಲಿ ಪ್ರತಿಶತ 30-35 ಪ್ರಗತಿಯ ನಿರೀಕ್ಷೆಯಲ್ಲಿದೆ. ಜಗತ್ತಿನ ಯಾವುದೇ ದೇಶ ಇಂಥಾ ನಿರೀಕ್ಷೆ ಇಟ್ಟುಕೊಳ್ಳಲು ಸದ್ಯದ ಪರಿಸ್ಥಿತಿಯಲ್ಲಿ ಸಾಧ್ಯವಿಲ್ಲ- ನಾಸ್‌ಕಾಂ ಅಧ್ಯಕ್ಷ ಫಿರೋಜ್‌ ವಾಂಡ್ರೆವಾಲ.

4. ಇಂಥಾ ಮೇಳಗಳು ಬೇರೆಡೆ ಯಶಸ್ವಿಯಾಗಿರುವ ಉದಾಹರಣೆಗಳು ಕಡಿಮೆ. ಆದರೆ ಕರ್ನಾಟಕದಲ್ಲಿ ರಾಜಕೀಯವಾಗಿ, ಜನೋಪಯೋಗಕ್ಕಾಗಿ ಈ ಕ್ಷೇತ್ರದ ಬಗ್ಗೆ ಮಹತ್ವಾಕಾಂಕ್ಷೆ ಇರುವುದರಿಂದ ಮೇಳ ಯಶಸ್ವಿಯಾಗುತ್ತದೆ. ನಮ್ಮ ಉತ್ಪನ್ನ ಮೈಕ್ರೋಸಾಫ್ಟ್‌ ಎಕ್ಸ್‌ಪಿಯಲ್ಲಿ ಕನ್ನಡ ಇದೆ. ಹಳ್ಳಿಗರಿಗೆ ಐಟಿ ಮುಟ್ಟಿಸಲು ಇದೊಂದು ವೇದಿಕೆ- ಮೈಕ್ರೋಸಾಫ್ಟ್‌ ಇಂಡಿಯಾ ಅಧ್ಯಕ್ಷ ರಾಜೀವ್‌ ನಾಯರ್‌ (ಮೈಕ್ರೋಸಾಫ್ಟ್‌ ಎಕ್ಸ್‌ಪಿಯನ್ನೂ ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು).

5.ದೇವನಹಳ್ಳಿ ಬಳಿ ಪ್ರತ್ಯೇಕ ಹಾರ್ಡ್‌ವೇರ್‌ ಪಾರ್ಕನ್ನು ಸ್ಥಾಪಿಸಲಾಗುವುದು- ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ

6. ಈಗ ನಾವು ಏನು ಆಡುತ್ತೇವೆ ಅನ್ನೋದು ಮುಖ್ಯವಲ್ಲ. ಏನು ಮಾಡುತ್ತೇವೆ ಎಂಬುದು ಮುಖ್ಯ. ಮಾತು ಕಡಿಮೆ ಮಾಡಿ, ಕೆಲಸ ಮಾಡೋಣ- ಇನ್ಫೋಸಿಸ್‌ ಅಧ್ಯಕ್ಷ ಎನ್‌.ಆರ್‌.ನಾರಾಯಣ ಮೂರ್ತಿ.

7. ಇನ್ಫೋಸಿಸ್‌ ನಾರಾಯಣ ಮೂರ್ತಿ ಅವರ ಗೌರವಾಧ್ಯಕ್ಷತೆಯಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮಿತಿ ರಚಿಸಿದ್ದೇವೆ. ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ಚುರುಕಾಗಲಿದ್ದು, 2005ರ ಹೊತ್ತಿಗೆ ಅಲ್ಲಿ ವಿಮಾನಗಳ ಟೇಕ್‌ಆಫ್‌ ಆಗಲಿದೆ- ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ.

ಕರ್ನಾಟಕ ಐಟಿ ಕಾರ್ಯದರ್ಶಿ ವಿವೇಕ್‌ ಕುಲಕರ್ಣಿ ಸ್ವಾಗತ ಕೋರಿದರು. ದೇಶ- ವಿದೇಶಗಳ ಹಲವಾರು ಅತಿಥಿಗಳು ಉದ್ಘಾಟನಾ ಸಮಾರಂಭದಲ್ಲಿ ಹಾಜರಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+