ಬೆಂಗೇರಿಖಾದಿ ಗ್ರಾಮೋದ್ಯೋಗ ಸಂಘದಲ್ಲಿ ಕನ್ನಡ ಧ್ವಜಗಳ ತಯಾರಿ
ಹುಬ್ಬಳ್ಳಿ: ಇಲ್ಲಿನ ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಘದಲ್ಲಿ ಅತ್ತ ಗಾಂಧಿ ತತ್ವಕ್ಕೆ ಮನ್ನಣೆ, ಇತ್ತ ಕನ್ನಡ ರಾಜ್ಯೋತ್ಸವದ ತಯಾರಿ. ಸಂಘವು ಪ್ರಥಮ ಬಾರಿಗೆ ಖಾದಿ ಬಟ್ಟೆಯಲ್ಲಿ ಕನ್ನಡ ಧ್ವಜ ನಿರ್ಮಿಸಿದೆ.
ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಘವು ರಾಷ್ಟ್ರ ಧ್ವಜ ನಿರ್ಮಾಣದಲ್ಲಿ ದಾಖಲೆ ಸ್ಥಾಪಿಸಿದ್ದು, ಕನ್ನಡ ಧ್ವಜ ನಿರ್ಮಾಣ ಪ್ರಯತ್ನ ಸಂಘದ ಎರಡನೇ ಮಹತ್ವದ ಹೆಜ್ಜೆಯಾಗಿದೆ. ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಸಾಕಷ್ಟು ಖಾದಿ ಕನ್ನಡ ಧ್ವಜ ನಿರ್ಮಿಸಿದ್ದು ಮಾರಾಟ ಕಾರ್ಯವೂ ನಡೆಯುತ್ತಿದೆ. ಕೆಂಪು-ಹಳದಿ ಕನ್ನಡ ಧ್ವಜದ ಮಧ್ಯೆ ಭುವನೇಶ್ವರಿಯ ಚಿತ್ರವನ್ನು ಬಿಡಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಬಿ.ಎಸ್. ಪಾಟೀಲ್ ಹೇಳಿದ್ದಾರೆ.
ಕನ್ನಡ ಧ್ವಜ ಕನ್ನಡ ನಾಡಿನಲ್ಲಿ ಮನೆ ಮಾತಾಗಬೇಕು. ಬೆಂಗೇರಿ ಖಾದಿ ಧ್ವಜದ ಪ್ರಸಿದ್ಧಿ ಕರ್ನಾಟಕದ ಪ್ರತಿ ಹಳ್ಳಿಗೂ ತಲುಪಬೇಕು ಎಂಬ ಉದ್ದೇಶದೊಂದಿಗೆ ಬೃಹತ್ ಪ್ರಮಾಣದ ಧ್ವಜ ತಯಾರಿ ಕೆಲಸ ನಡೆಯುತ್ತಿದೆ ಎಂದು ಪಾಟೀಲ್ ಹೇಳುತ್ತಾರೆ.
ಆದರೆ ಧ್ವಜದ ಗಾತ್ರದ ಬಗ್ಗೆ ಇನ್ನೂ ಯಾವುದೇ ತೀರ್ಮಾನವಾಗಿಲ್ಲ. ಬೆಂಗಳೂರಿನಲ್ಲಿ ಕನ್ನಡಿಗರು ಕೆಂಪು ಹಳದಿ ಧ್ವಜ ಬಳಸಿದರೆ, ಮೈಸೂರಿನಲ್ಲಿ ಬಳಸುವ ಕನ್ನಡ ಧ್ವಜದಲ್ಲಿ ಭುವನೇಶ್ವರಿಯ ಚಿತ್ರವೂ ಇರುತ್ತದೆ. ಉತ್ತರ ಕರ್ನಾಟಕದಲ್ಲಿಯೂ ಈ ಬಗ್ಗೆ ಒಮ್ಮತವಿಲ್ಲ. ಸದ್ಯಕ್ಕೆ ಗಾತ್ರದ ಬಗ್ಗೆ ಹೆಚ್ಚು ಗಮನವಿರಿಸದೆ ಕನ್ನಡ ಧ್ವಜಗಳನ್ನು ನಿರ್ಮಿಸಲಾಗಿದೆ. ಮಾದರಿ ಧ್ವಜವೊಂದನ್ನು ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಕಳುಹಿಸಿ, ಏಕರೂಪದ ಧ್ವಜವನ್ನು ಅಂಗೀಕರಿಸುವಂತೆ ಸರಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ ಎಂದು ಪಾಟೀಲ್ ಸಂದರ್ಶವೊಂದರಲ್ಲಿ ಹೇಳಿದ್ದಾರೆ.
(ಇನ್ಫೋ ವಾರ್ತೆ)