ಹೈದ್ರಾಬಾದ್ ಕರ್ನಾಟಕ ಬಂದ್ಗೆ ಕ್ರಾಂತಿ ಕವಿ ಗದ್ದರ್ ಬೆಂಬಲ?
ಗುಲ್ಬರ್ಗಾ: ಬೀದರ್, ಗುಲ್ಬರ್ಗಾ, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳನ್ನೊಳಗೊಂಡ ಪ್ರತ್ಯೇಕ ರಾಜ್ಯ ಸ್ಥಾಪನೆಗೆ ಒತ್ತಾಯಿಸಿ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ನವಂಬರ್ 1 ರಂದು ಬಂದ್ ಆಚರಣೆಗೆ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಕರೆ ನೀಡಿದೆ. ಈ ಬಂದ್ ಯಾವುದೇ ಕಾರಣದಿಂದ ನಿಲ್ಲುವುದಿಲ್ಲ ಎಂದು ಸಮಿತಿಯ ಅಧ್ಯಕ್ಷ ವೈಜನಾಥ ಪಾಟೀಲ್ ಸ್ಪಷ್ಟ ಪಡಿಸಿದ್ದಾರೆ.
ಪ್ರತ್ಯೇಕ ರಾಜ್ಯ ಸ್ಥಾಪನೆ ಬೇಡಿಕೆಯನ್ನು ಸರ್ಕಾರದ ಮುಂದಿರಿಸಲಾಗಿದೆ. ಈ ಬೇಡಿಕೆಯನ್ನು ಬೆಂಬಲಿಸಿ ಸಾರ್ವಜನಿಕರಿಂದಲೂ ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದು ಹೋರಾಟ ಸಮಿತಿ ಅಧ್ಯಕ್ಷ ವೈಜನಾಥ ಪಾಟೀಲ್ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.
ರಾಯಚೂರಿನಲ್ಲಿ ರಾಘವೇಂದ್ರ ಕುಷ್ಟಗಿ, ಕೊಪ್ಪಳದಲ್ಲಿ ಅಲ್ಲಂ ಪ್ರಭು ಬೇತಾದುರ್, ಬಳ್ಳಾರಿಯಲ್ಲಿ ರುದ್ರಯ್ಯ ಮತ್ತು ಬೀದರ್ನಲ್ಲಿ ದೇವೇಂದ್ರ ಕಮಲ್ ನವೆಂಬರ್ 1ರ ಬಂದ್ ಆಚರಣೆಯ ನೇತೃತ್ವ ವಹಿಸುವರು.
ಹೆಚ್ಚಿನ ರಾಜಕೀಯ ಪಕ್ಷಗಳು ಬಂದ್ ಆಚರಣೆಯನ್ನು ವಿರೋಧಿಸಿದ್ದರೂ ಬಂದ್ ಆಚರಣೆಯ ನಿರ್ಧಾರದಿಂದ ಹೋರಾಟ ಸಮಿತಿ ಹಿಂತೆಗೆಯುವುದಿಲ್ಲ ಎಂದು ಪಾಟೀಲ್ ಸ್ಪಷ್ಟಪಡಿಸಿದರು. ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ಕ್ರಾಂತಿಕಾರಿ ಕವಿ ಗದ್ದರ್ ಅವರ ಬೆಂಬಲ ಇರುವುದಾಗಿ ಪತ್ರಿಕೆಗಳ ಮೂಲಕ ತಿಳಿದು ಬಂದಿದೆ. ನವೆಂಬರ್ 1ರ ಹೋರಾಟದಲ್ಲಿ ಗದ್ದರ್ ಅವರು ಪಾಲ್ಗೊಳ್ಳುವಂತೆ ಕೇಳಿಕೊಳ್ಳಲಾಗುವುದು ಎಂದು ಅವರು ಹೇಳಿದರು.
(ಇನ್ಫೋ ವಾರ್ತೆ)