ಕೃಷ್ಣರಿಗೆ ಪ್ರಾಣ ಬೆದರಿಕೆ; ವಿಧಾನಸೌಧಕ್ಕೆ ಬಂತು ಬಿಳಿಪುಡಿ
ಬೆಂಗಳೂರು : ‘ಅಂಚೆ ಮೂಲಕ ಆಂಥ್ರಾಕ್ಸ್ ’ ಭೀತಿ ಕರ್ನಾಟಕವನ್ನೂ ಬಿಟ್ಟಿಲ್ಲ. ಶನಿವಾರ ರಾಜ್ಯದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಸಚಿವಾಲಯ ಕಚೇರಿಗೆ ಬಂದಿರುವ ಅಂಚೆ ಕವರ್ನಲ್ಲಿ ಬಿಳಿ ಪುಡಿ ಹಾಗೂ ಬೆದರಿಕೆ ಪತ್ರ ಇದ್ದು, ಆಂಥ್ರಾಕ್ಸ್ ಭೀತಿ ಹುಟ್ಟಿಸಿದೆ.
ಬಿಳಿಪುಡಿಯಾಂದಿಗೆ ಇರುವ ಬೆದರಿಕೆ ಪತ್ರ, ಇಂಗ್ಲಿಷ್ ಲಿಪಿಯ ಉರ್ದು ಭಾಷೆಯಲ್ಲಿದೆ. ಆಫ್ಘನ್ ವಿರುದ್ಧ ಯುದ್ಧಸಾರಿರುವ ಅಮೆರಿಕಕ್ಕೆ - ಕರ್ನಾಟಕ ಬೆಂಬಲ ನೀಡಿದರೆ, ಮುಖ್ಯಮಂತ್ರಿ ಕೃಷ್ಣ ಅವರನ್ನು ಕೊಲ್ಲುವುದಾಗಿ ಬೆದರಿಸಲಾಗಿದೆ. ಇದೊಂದು ಹುಸಿ ಬೆದರಿಕೆ ಪತ್ರ ಎಂದು ಪೊಲೀಸರು ಭಾವಿಸಿದ್ದಾರಾದರೂ, ಪುಡಿಯು ಆಂಥ್ರಾಕ್ಸ್ ಸೋಂಕಿನ ಅಂಶ ಹೊಂದಿರುವುದೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಪರೀಕ್ಷೆಗೆ ಕಳಿಸಲಾಗಿದೆ.
ಮುಖ್ಯಮಂತ್ರಿ ಕೃಷ್ಣ ಅವರ ಕಚೇರಿಗೆ ನಿತ್ಯ ಬರುವ ಪತ್ರಗಳ ಕಟ್ಟಿನಲ್ಲೇ ಈ ಪತ್ರವೂ ಬಂದಿದೆ. ಭದ್ರತಾ ಸಿಬ್ಬಂದಿ - ಪೊಲೀಸ್ ಅಧಿಕಾರಿಗಳು ಹಾಗೂ ತಜ್ಞರು ಈ ಬೆದರಿಕೆ ಪತ್ರ ಹಾಗೂ ಅದರಲ್ಲಿರುವ ಬಿಳಿಪುಡಿಗೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಿದ್ದಾರೆ.
ಆ ಅಂಚೆ ಪತ್ರದ ಮೇಲೆ ಬಿನ್ ಲಾಡೆನ್ ಸೈನಿಕ ಎಂಬ ಸಹಿ ಇದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ. ಮಡಿಯಾಳ್ ತಿಳಿಸಿದ್ದಾರೆ. ಕೆಲವೇ ದಿನಗಳ ಹಿಂದೆ ಕೇಂದ್ರಗೃಹ ಸಚಿವ ಎಲ್.ಕೆ. ಆಡ್ವಾಣಿ ಅವರ ಕಚೇರಿಗೂ ಬಿಳಿ ಪುಡಿಯ ಅಂಚೆ ಪತ್ರ ಬಂದಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಮೂಲಗಳ ಪ್ರಕಾರ ಈ ಪತ್ರ ಬೆಳಗಾವಿ ಜಿಲ್ಲೆಯ ಇಂದವಾಡಿ ಗ್ರಾಮದಿಂದ ಬಂದಿದೆ. ಬೆದರಿಕೆ ಪತ್ರದಲ್ಲಿ ಆಫ್ಘಾನಿಸ್ತಾನದ ಹೆಸರೂ ಇದ್ದು, ಶುಕ್ರವಾರ ಮೈಸೂರು ದಸರಾ ಮಹೋತ್ಸವದಲ್ಲಿ ಮುಖ್ಯಮಂತ್ರಿ ಕೃಷ್ಣ ಅವರನ್ನು ಕೊಲ್ಲುವುದಾಗಿ ತಿಳಿಸಲಾಗಿತ್ತು.
(ಇನ್ಫೋ ವಾರ್ತೆ)