ನವೆಂಬರ್ 19ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನ
ನವದೆಹಲಿ : ನವೆಂಬರ್ 19ರಿಂದ ಸಂಸತ್ನ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಈ ವಿಷಯವನ್ನು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಮೋದ್ ಮಹಾಜನ್ ಪ್ರಕಟಿಸಿದ್ದಾರೆ. ಚಳಿಗಾಲದ ಈ ಅಧಿವೇಶನದಲ್ಲಿ ಉಭಯ ಸದನಗಳೂ ಸೇರಲಿದ್ದು, ಸದನವು ಬಹುತೇಕ ಡಿಸೆಂಬರ್ 21ರವರೆಗೆ ನಡೆಯಲಿದೆ ಎಂದರು.
ಈ ಅಧಿವೇಶನದಲ್ಲಿ ಕನಿಷ್ಠ 23 ಸಮಾವೇಶಗಳಿರುತ್ತವೆ ಎಂದು ಅವರು, ದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದನೆಯನ್ನು ಹತ್ತಿಕ್ಕಲು ಸಿದ್ಧಪಡಿಸಿರುವ ವಿಧೇಯಕವನ್ನು ಮಂಡಿಸುವುದಾಗಿ ಹೇಳಿದರು. ಈ ಮಸೂದೆಗೆ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರು ಸಹಿ ಹಾಕಿದ್ದಾರೆ. ಇದನ್ನು ಶಾಸನಾತ್ಮಕಗೊಳಿಸಲು ಸದನದ ಮುಂದೆ ಮಂಡಿಸಲಾಗುವುದು ಎಂದರು.
ವಿಶ್ವವೇ ಭಯೋತ್ಪಾದನೆಯಿಂದ ತತ್ತರಿಸಿದೆ. ಈ ಸಂದರ್ಭದಲ್ಲಿ ಇಂತಹ ಒಂದು ವಿಧೇಯಕದ ತುರ್ತು ಅಗತ್ಯ ಇದೆ ಎಂದ ಅವರು, ಸರಕಾರ ಮಂಡಿಸುತ್ತಿರುವ ವಿಧೇಯಕಕ್ಕೆ ವಿರೋಧ ಪಕ್ಷಗಳು ಸಂಪೂರ್ಣ ಬೆಂಬಲ ನೀಡಲಿವೆ ಎಂಬ ಆಶಾಭಾವನೆಯನ್ನೂ ಅವರು ವ್ಯಕ್ತಪಡಿಸಿದರು.
ಚಳಿಗಾಲ ಅಧಿವೇಶನದ ದಿನಾಂಕ ನಿಗದಿಗಾಗಿ ಗುರುವಾರ ನವದೆಹಲಿಯಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯ ನಂತರ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ಭಯೋತ್ಪಾದನೆ ನಿಗ್ರಹ ಅಧ್ಯಾದೇಶ ಸೇರಿದಂತೆ ಒಟ್ಟು ಮೂರು ವಿಧೇಯಕಗಳನ್ನು ಮಂಡಿಸಲಾಗುವುದು ಎಂದೂ ಮಹಾಜನ್ ಹೇಳಿದರು.
ಈ ಅಧಿವೇಶನದಲ್ಲಿ ಪಾಸ್ಪೋರ್ಟ್ ಕಾಯಿದೆ ತಿದ್ದುಪಡಿ, ಟಾಡಾ, ಬಂಡವಾಳ ಹಿಂತೆಗೆತ, ಷೇರುಗಳ ಮರು ಖರೀದಿಯೇ ಮೊದಲಾದ ಪ್ರಮುಖ ವಿಷಯಗಳು ಚರ್ಚೆಗೆ ಬರಲಿವೆ. ಈ ಮಧ್ಯೆ ತೆಹಲ್ಕಾ ಹಗರಣದ ವಿಚಾರಣೆ ನಡೆಯುತ್ತಿರುವಾಗಲೇ ಜಾರ್ಜ್ ಫರ್ನಾಂಡಿಸ್ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿರುವುದನ್ನು ವಿರೋಧಿಸುತ್ತಿರುವ ಪ್ರತಿಪಕ್ಷಗಳು ಹಣಾಹಣಿಗೆ ಸಜ್ಜಾಗುತ್ತಿವೆ.
(ಪಿ.ಟಿ.ಐ/ಇನ್ಫೋ ವಾರ್ತೆ)