Get Updates
Get notified of breaking news, exclusive insights, and must-see stories!

ಹೂಮಾಲೆ, ಬಾಳೆಕಂದು, ಬೂದು ಗುಂಬಳಕ್ಕೆ ಭಾರೀ ಬೇಡಿಕೆ

ಬೆಂಗಳೂರು: ಹಿಂದೆ ವಿಜಯನಗರದ ರಾಜಬೀದಿಗಳಲ್ಲಿ ಮುತ್ತು, ರತ್ನ, ವಜ್ರ, ವೈಢೂರ್ಯಗಳನ್ನು ರಾಶಿ ಹಾಕಿ ಮಾರುತ್ತಿದ್ದರಂತೆ. ಈ ಹೊತ್ತು ವಿಜಯನಗರ ಅರಸರ ಕೊಡುಗೆಯಾದ ದಸರೆಯ - ಆಯುಧ ಪೂಜೆ ಅಂಗವಾಗಿ ರಸ್ತೆಯಂಚಿನಲ್ಲಿ ಬೂದು ಗುಂಬಳ, ಬಾಳೆ ಕಂದಿನ ಬಿಕರಿ ಆಗುತ್ತಿದೆ.

ಕನ್ನಡಿಗರ ನಾಡ ಹಬ್ಬವಾದ ದಸರೆ. ಹೆಸರೇ ಹೇಳುವಂತೆ 10 ದಿನಗಳ ಹಬ್ಬ. ಈ ಹತ್ತು ದಿನದ ಹಬ್ಬದಲ್ಲಿ ಮಹಾನವಮಿಗೆ ಹೆಚ್ಚಿನ ಒತ್ತು. ಅಂದು ಆಯುಧಪೂಜೆ. ನಾಡಿನ ಎಲ್ಲ ಅಂಗಡಿ ಮುಂಗಟ್ಟುಗಳಲ್ಲಿ ಬಣ್ಣ ಬಳಿದು ಸಿಂಗರಿಸಿ ಪೂಜಿಸುವುದು ವಾಡಿಕೆ.

ಸೈಕಲ್‌ ಶಾಪ್‌, ಸ್ಕೂರಟರ್‌, ಕಾರ್‌ ಗ್ಯಾರೇಜ್‌ಗಳು, ಕಾರ್ಪೆಂಟರ್‌ ಶಾಪ್‌ಗಳು, ವೆಲ್ಡಿಂಗ್‌ವರ್ಕ್ಸ್‌, ಬ್ಯಾಂಕ್‌, ಪತ್ರಿಕಾಲಯ, ಕಾರ್ಖಾನೆಯಿಂದ ಹಿಡಿದು ಕಂಪ್ಯೂಟರ್‌ ಕಂಪನಿವರೆಗೆ ಎಲ್ಲರೂ ಬಾಗಿಲಲ್ಲೊಂದು ಬೂದುಗುಂಬಳ ಒಡೆದು, ಮುಖ್ಯದ್ವಾರದಲ್ಲಿ ಎತ್ತರದ ಬಾಳೆಕಂದುಗಳನ್ನು, ಮಾವಿನಸೊಪ್ಪಿನ ತೋರಣವನ್ನು ಕಟ್ಟಿ, ದುರ್ಗೆಯನ್ನೂ, ವಾಹನೇಶ್ವರನನ್ನೂ, ದುರಸ್ತಿ ಮಾಡಲು ಬಳಸುವ ಸ್ಪಾನರ್‌, ಸ್ಕೂೃಡ್ರೆೃವರ್‌ ಇತ್ಯಾದಿಯನ್ನು ಪೂಜಿಸುತ್ತಾರೆ.

ವಾಹನಗಳಿಂದ ಹಿಡಿದು ಕಂಪ್ಯೂಟರ್‌ಗಳಿಗೂ ಅರಿಶಿನ ಕುಂಕುಮ ಹಚ್ಚಿ, ಹೂಮಾಲೆ ಹಾಕುತ್ತಾರೆ. ನಿಂಬೆಹಣ್ಣನ್ನು ನೀವಾಳಿಸಿ, ವಾಹನಗಳನ್ನು ಅದರ ಮೇಲೆ ಓಡಿಸುತ್ತಾರೆ. ಕಡಲೇಪುರಿ, ಸಿಹಿ ಹಂಚಿ ಸಂಭ್ರಮ ಪಡುತ್ತಾರೆ. ಕೆಲವು ಕೈಗಾರಿಕೆಗಳಲ್ಲಿ ಆಯುಧ ಪೂಜೆಯ ದಿನ ಬೋನಸ್‌ ಹಂಚುತ್ತಾರೆ. ಕುಕ್ಕರ್‌, ಪಾತ್ರೆ, ಸ್ಟೌ ಉತ್ಪಾದನಾ ಕಂಪನಿಗಳು ತಮ್ಮ ಕಾರ್ಮಿಕರಿಗೆ ಸಿಹಿಯ ಪೊಟ್ಟಣದ ಜೊತೆ ಕುಕ್ಕರನ್ನೋ, ಪಾತ್ರೆಯನ್ನೋ ಉಡುಗೊರೆಯಾಗಿ ನೀಡುತ್ತಾರೆ.

ಮನೆಮನೆಯಲ್ಲೂ ಕೂಡ ಚಾಕು, ಕತ್ತರಿಯನ್ನು ಪಟ್ಟದಬೊಂಬೆಯ ಮುಂದಿಟ್ಟು ಪೂಜಿಸುತ್ತಾರೆ. ಆಯುಧ ಪೂಜೆಯ ದಿನ ವಾಹನವನ್ನು ತೊಳೆದು, ಒರೆಸಿ, ಹೂವಿನ ಹಾರದಿಂದ ಅಲಂಕರಿಸಿ, ಅರಿಶಿನ ಕುಂಕುಮ ಹಚ್ಚಿ ಪೂಜಿಸದ ಕನ್ನಡಿಗರೇ ವಿರಳ. ಇದು ಮೈಸೂರು ಸಂಪ್ರದಾಯ.

ಕೆಲವು ಕಾರ್ಖಾನೆಗಳಲ್ಲಿ ಆಯುಧ ಪೂಜೆಯ ದಿನ ಸರಕಾರಿ ರಜೆಯಾದ ಕಾರಣ ಹಿಂದಿನ ದಿನ ರಾತ್ರಿಯೇ ಪೂಜೆ ನಡೆಯುತ್ತದೆ. ಸರಕಾರಿ ಬಸ್‌ ಚಾಲಕರು ತಮ್ಮ ಬಸ್‌ಗಳನ್ನು ಹೂವಿನ ಹಾರಗಳಲ್ಲೇ ಮುಳುಗಿಸುತ್ತಾರೆ. ಲಾರಿ, ಟೆಂಪೋ, ಆಟೋ ಚಾಲಕರು ತಮ್ಮ ವಾಹನಗಳಿಗೆ ಸುಂದರವಾಗಿ ಆಲಂಕಾರ ಮಾಡುತ್ತಾರೆ. ಅಪಘಾತ- ದೃಷ್ಟಿ ಆಗದಿರಲೆಂದು ಕುಂಬಳಕಾಯಿ ಒಡೆಯುತ್ತಾರೆ. ಕೆಲವರು ಕೋಳಿ, ಕುರಿಯನ್ನೂ ಬಲಿಕೊಡುತ್ತಾರೆ.

ಹೀಗಾಗೇ ಆಯುಧ ಪೂಜೆಯ ದಿನ ಕುಂಬಳ, ಬಾಳೆಕಂದು, ನಿಂಬೆಹಣ್ಣು ಹಾಗೂ ಹೂವಿನ ಬೆಲೆ ಗಗನಕ್ಕೇರುತ್ತದೆ. ನಿನ್ನೆ ವರೆಗೆ ಕೆ.ಜಿ.ಗೆ 15 ರುಪಾಯಿ ಇದ್ದ ಬಾಳೆ ಹಣ್ಣಿನ ಬೆಲೆ ಬುಧವಾರ 20 ರುಪಾಯಿ ಆಗಿದೆ. ಬಾಳೆ ಕಂದು, ಬೂದುಗುಂಬಳ ತನ್ನ ಎತ್ತರ ಹಾಗೂ ಗಾತ್ರಕ್ಕೆ ತಕ್ಕಂತೆ 15 ರುಪಾಯಿಯಿಂದ 150 ರುಪಾಯಿವರೆಗೆ ಮಾರಾಟ ಆಗುತ್ತಿದೆ.

ಪುರಿಬಟ್ಟಿಗಳಲ್ಲಿ - ಪುರಿ ಮಾರುವ ಅಂಗಡಿಗಳಲ್ಲಿ ಜನಜಾತ್ರೆ ಇದ್ದರೆ, ಸಿಹಿ ಅಂಗಡಿಗಳನ್ನು ಜನ ಇರುವೆಯಂತೆ ಮುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಮಾರುಗಟ್ಟಲೆ ಲೆಕ್ಕದಲ್ಲಿ ಜನ ಹೂ ಕೊಳ್ಳುತ್ತಿದ್ದಾರೆ. ಹೂ ಮಾಲೆಗಳಿಗಂತೂ ವಿಪರೀತ ಬೇಡಿಕೆ. ಬೆಲೆಯೂ ದುಬಾರಿ.

ಗುಲಾಬಿ ಹೂವಿನ ಮಾಲೆಯಾಂದು 100ರಿಂದ 500 ರುಪಾಯಿಯಾದರೆ, ಮಲ್ಲಿಗೆ - ಸುಗಂಧರಾಜ ಹೂ ಮಾಲೆಗಳು ತಮ್ಮ ಅಳತೆಗೆ ತಕ್ಕಂತೆ ಬೆಲೆ ನಿರ್ಧರಿಸಿಕೊಂಡಿವೆ. ಸೇವಂತಿಗೆ ಹೂವಿಗಂತೂ ಭಾರಿ ಬೇಡಿಕೆ, ಕಟ್ಟಿದ ಹೂ, ಬಿಡಿ ಹೂ ಎರಡೂ ಮಾರುಕಟ್ಟೆಯಲ್ಲಿ ಲಭ್ಯ. ಸೇವಂತಿಗೆ ಗುಣಮಟ್ಟಕ್ಕೆ ತಕ್ಕಂತೆ ಮಾರಿಗೆ 15ರಿಂದ 25ರುಪಾಯಿ ವರೆಗೆ ದೊರೆಯುತ್ತಿದೆ. ಬೆಂಗಳೂರು ಜಯಚಾಮರಾಜೇಂದ್ರ ಮಾರುಕಟ್ಟೆ, ಯಶವಂತಪುರ ಮಾರುಕಟ್ಟೆ, ಗಾಂಧೀಬಜಾರ್‌, ಮಲ್ಲೇಶ್ವರ ಮಾರುಕಟ್ಟೆಯಲ್ಲಿ ಕಾಲಿಡಲೂ ಸ್ಥಳವಿಲ್ಲದಷ್ಟು ಜನಸೇರಿದ್ದಾರೆ. 15 ರುಪಾಯಿ ಮಾರು ಎನ್ನುವ ಹೂ ವ್ಯಾಪಾರಿಗಳ ಕೂಗು ಕರ್ನಾಟಕಾದ್ಯಂತ ಮೊಳಗುತ್ತಿದೆ.

(ಇನ್‌ಫೋ ಇನ್‌ಸೈಟ್‌)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+