ಕನ್ನಡ ಗಣಕೀಕರಣ
ಬೆಂಗಳೂರು : ಮಾಹಿತಿ ತಂತ್ರಜ್ಞಾನ ಇಲಾಖೆ ಕನ್ನಡ ಕಂಪ್ಯೂಟರ್ ಕೇಂದ್ರವೊಂದನ್ನು ತೆರೆಯಲಿದೆ. ಸಾಕಷ್ಟು ಸಂಪನ್ಮೂಲಗಳನ್ನು ಕ್ರೋಢೀಕರಿಸಿ, ಕನ್ನಡ ಗಣಕೀಕರಣದ ಕಾರ್ಯವನ್ನು ಈ ಕೇಂದ್ರ ಮಾಡಲಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರೊ. ಬಿ.ಕೆ.ಚಂದ್ರಶೇಖರ್ ತಿಳಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಮಾಹಿತಿ ತಂತ್ರಜ್ಞಾನ ನಿರ್ದೇಶನಾಲಯ ಜಂಟಿಯಾಗಿ ಸಿದ್ಧಪಡಿಸಿರುವ ಸಮಾನ ಕನ್ನಡ ಲಿಪಿ ತಂತ್ರಾಂಶದ ಸಿಡಿ ಹಾಗೂ ಕಂಪ್ಯೂಟರ್ ಕನ್ನಡೀಕರಣ ಕ್ರಿಯಾ ಯೋಜನೆಯ ಕೈಪಿಡಿಯನ್ನು ಮಂಗಳವಾರ ಬಿಡುಗಡೆ ಮಾಡಿ, ಅವರು ಮಾತಾಡುತ್ತಿದ್ದರು. ಸಮಾಜ ಹಾಗೂ ತಂತ್ರಜ್ಞಾನದ ಪೂರಕ ಪ್ರಗತಿಯಾಗಬೇಕು. ಈ ನಿಟ್ಟಿನಲ್ಲಿ ಭಾಷೆಯ ಬಗ್ಗೆ ವಿವಾದಗಳು ಇದ್ದೇ ಇರುತ್ತವೆ. ಸ್ಥಳೀಯ ಭಾಷೆಗೆ ತಂತ್ರಜ್ಞಾನವನ್ನು ಹೊಂದಿಸಲು ಸಾಕಷ್ಟು ಚರ್ಚೆಗಳಾಗಬೇಕು ಎಂದರು.
ಚೀನಾ ದೇಶ ಪ್ರೆೃಮರಿ ಶಾಲೆಯಲ್ಲೇ ಇಂಗ್ಲಿಷ್ ಕಲಿಸಲು ಶುರುಮಾಡಿದೆ. ಎಲ್ಲಾ ಮಾನವ ಸಂಪನ್ಮೂಲವನ್ನೂ ತಂತ್ರಜ್ಞಾನ ಕ್ಷೇತ್ರದಲ್ಲೇ ತೊಡಗಿಸಿಕೊಳ್ಳುವುದು ಅದರ ಇರಾದೆ ಇರಬಹುದು. ಹೀಗಾದಾಗ ಅದು ತನ್ನ ನೆಲದ ಭಾಷೆಯನ್ನು ತಂತ್ರಜ್ಞಾನದೊಡನೆ ಹೇಗೆ ಹೊಂದಿಸಿಕೊಂಡು ಹೋಗುತ್ತದೆ ಅನ್ನುವ ಬಗ್ಗೆ ನನಗೆ ಕುತೂಹಲವಿದೆ. ಸದ್ಯದಲ್ಲೇ ಚೀನಾಗೆ ಹೋಗಿ, ಈ ಬಗ್ಗೆ ತಿಳಿಯುವ ಅವಕಾಶ ನನಗೆ ದೊರೆಯಲಿದೆ. ಅದನ್ನು ಕನ್ನಡ ಭಾಷೆಯಲ್ಲಿ ಹೇಗೆ ಅನ್ವಯಿಸಬಹುದು ಎಂಬುದನ್ನು ಅರಿಯಲು ಉತ್ಸುಕನಾಗಿದ್ದೇನೆ ಎಂದು ಚಂದ್ರಶೇಖರ್ತಮ್ಮ ಆಶಯ ಭಾಷಣದಲ್ಲಿ ಹೇಳಿದರು.
ಯೋಜನೆಯ ರೂಪುರೇಷೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಸಂಕ್ಷಿಪ್ತವಾಗಿ ವಿವರಿಸಿದ್ದು ಹೀಗೆ...
- ಜನರಿಗೆ ಕಂಪ್ಯೂಟರ್ ತೀರಾ ಹತ್ತಿರಾಗಬೇಕು. ಆಡುಭಾಷೆಯಲ್ಲೇ ಅದು ಅನುಷ್ಠಾನಕ್ಕೆ ಬಂದಲ್ಲಿ ಮಾತ್ರ ಇದು ಸಾಧ್ಯ. ಕಂಪ್ಯೂಟರ್ ಪರಿಣತರು ಮತ್ತು ಸಾಮಾನ್ಯ ಜನರ ನಡುವೆ ತಾಂತ್ರಿಕ ಕಂದರ ನಿರ್ಮಾಣವಾಗದಂತೆ ನೋಡಿಕೊಳ್ಳುವ ಸಾಮಾಜಿಕ ಹೊಣೆಯೂ ನಮ್ಮ ಮೇಲಿದೆ. ಚೀನಾ, ಜರ್ಮನಿ ಹಾಗೂ ಜಪಾನ್ ಈ ನಿಟ್ಟಿನಲ್ಲಿ ನಮಗೆ ಮಾದರಿ ದೇಶಗಳು.
- ಈ ದೇಶಗಳಲ್ಲಿ ಔದ್ಯೋಗಿಕ ಕ್ಷೇತ್ರದಲ್ಲಿ ಮಾತ್ರ ಇಂಗ್ಲಿಷ್ ಬಳಕೆಯಿದೆ. ಉಳಿದ ಎಲ್ಲಾ ಆಡಳಿತಗಳಲ್ಲಿ ಕಂಪ್ಯೂಟರ್ನಲ್ಲೂ ಬಳಕೆಯಲ್ಲಿರುವುದು ಆಯಾ ದೇಶಗಳ ಭಾಷೆ ಅನ್ನುವುದು ಮುಖ್ಯ. ನಾವೂ ಈ ನಿಟ್ಟಿನಲ್ಲಿ ಈಗ ಯೋಚಿಸುತ್ತಿದ್ದೇವೆ. ಐಟಿ ನಿರ್ದೇಶನಾಲಯ ಮನಸ್ಸು ಮಾಡಿದೆ. ಕನ್ನಡ ಗಣಕ ಪರಿಷತ್ತು ಸಹಕಾರ ನೀಡುತ್ತಿದೆ.
- ಪ್ರಮಾಣಿತ ಕೀಲಿಮಣೆ, ಸಮಾನ ತಂತ್ರಾಂಶದ ಬಳಕೆಗೆ ಸರ್ಕಾರ ಕಳೆದ ವರ್ಷವೇ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಐಟಿ ನಿರ್ದೇಶನಾಲಯ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಒಟ್ಟಾಗಿ ಎರಡು ಹಂತದ ಯೋಜನೆ ಹಮ್ಮಿಕೊಂಡಿದೆ- ಮೊದಲನೆಯದು ಕನ್ನಡಕ್ಕಿರುವ ತಾಂತ್ರಿಕ ತೊಡಕುಗಳ ನಿವಾರಣೆ. ಎರಡನೆಯದು ಅನ್ವಯಿಕ ತಂತ್ರಾಂಶಗಳ ಸಿದ್ಧತೆ (ಕಚೇರಿಗಳಿಗೆ ಸಮಾನ ಕನ್ನಡ ತಂತ್ರಾಂಶಗಳನ್ನು ಒದಗಿಸಿ, ಎಲ್ಲಾ ಕ್ಷೇತ್ರಗಳಲ್ಲೂ ಕನ್ನಡ ಗಣಕೀಕರಣ ಜಾರಿಗೊಳಿಸುವುದು).
- ಕನ್ನಡ ಗಣಕೀಕರಣ ನಮ್ಮ ಆಶಯ. ಅದನ್ನು ಅನುಷ್ಠಾನಕ್ಕೆ ತರಬೇಕಾದುದು ಐಟಿ ಇಲಾಖೆಯ ಜವಾಬ್ದಾರಿ. ಈ ನಿಟ್ಟಿನಲ್ಲಿ ಇಲಾಖೆ ಒಂದು ಶಾಶ್ವತ ವ್ಯವಸ್ಥೆಗೆ ಚಾಲನೆ ಕೊಡಬೇಕು.
ತಮಿಳುನಾಡಲ್ಲಿ ಕಂಪ್ಯೂಟರ್ ಶಿಷ್ಟತೆ, ಏಕರೂಪತೆ ಸಿದ್ಧವಾಯಿತು. ಆದರೆ ಸಾಮಾನ್ಯನಿಗೆ ಅದನ್ನು ನಿರ್ಧರಿಸಲು ಮಾನದಂಡ ಇಲ್ಲದ ಕಾರಣ ಯೋಜನೆ ವಿಫಲವಾಯಿತು. ನಮ್ಮ ಸರ್ಕಾರ ಅದಕ್ಕಾಗೇ ಮಾನಕ ತಂತ್ರಾಂಶ ಸಿದ್ಧಪಡಿಸಲು ಕೇಳಿತ್ತು. ಅದು ಇದೀಗ ನಿಮ್ಮ ಪಾಲಿಗೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಂಶೋಧನೆ ಮತ್ತು ಅಭಿವೃದ್ಧಿಯಿಂದ ಪೂರ್ಣ ಪ್ರಮಾಣದ ಕನ್ನಡ ಗಣಕೀಕರಣ ಸಾಧ್ಯವಾಗಲಿದೆ ಎಂದರು.
ಗಣಕ ಪರಿಷತ್ನ ಡಾ. ಯು.ಬಿ.ಪವನಜ ಕನ್ನಡ ಲಿಪಿ ತಂತ್ರಾಂಶ ಸಿಡಿಯ ಪ್ರಾತ್ಯಕ್ಷಿಕೆ ನೀಡಿದರು. ಕನ್ನಡ ಕಲಿ, ಯೋಜನೆಯ ಹಿಂದಿನ ಕೈಗಳು, ಗಣಕ ಪರಿಷತ್ನಲ್ಲಿ ಯಾರ್ಯಾರು ಕೆಲಸ ಮಾಡುತ್ತಿದ್ದಾರೆ, ಕೀಲಿಮಣೆ ಮೊದಲಾದ ಮಾಹಿತಿ ಸಿಡಿಯಲ್ಲಿ ಉಂಟು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಿ.ಸೋಮಶೇಖರ್, ಮಾಹಿತಿ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ವಿವೇಕ್ ಕುಲಕರ್ಣಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಸಿ.ಎಸ್.ಕೇದಾರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವಾರ್ತಾ
ಸಂಚಯ
ಮುಖಪುಟ
/
ಕರ್ನಾಟಕ
ಸಿಲಿಕಾನ್
ಕಣಿವೆ