ಬೈಂದೂರಿನಲ್ಲಿ ಬಾಕ್ಸೈಟ್ ನಿಕ್ಷೇಪ ! ಗಣಿಗಾರಿಕೆ ಸರದಿ ಎಂಎಂಎಲ್ನದು
ಉಡುಪಿ : ಇಲ್ಲಿನ ಬೈಂದೂರು ಗ್ರಾಮದಲ್ಲಿ ಅಲ್ಯೂಮಿನಿಯಂ ಅದಿರು, ಬಾಕ್ಸೈಟ್ನ ನಿಕ್ಷೇಪಗಳಿರುವುದು ಪತ್ತೆಯಾಗಿದ್ದು ಉಡುಪಿ ಜಿಲ್ಲೆ ಹೊಸ ಉದ್ಯಮವೊಂದಕ್ಕೆ ತೆರೆದುಕೊಳ್ಳುವ ದಿನ ಹತ್ತಿರವಾಗಿದೆ. ಅಂದಮೇಲೆ, ದಕ್ಷಿಣಕನ್ನಡ ಪರಿಸರವಾದಿಗಳಿಗೆ ರಜೆ ಇಲ್ಲ ಎಂದಾಯಿತು.
ಮೈಸೂರು ಮಿನರಲ್ಸ್ ಲಿಮಿಟೆಡ್(ಎಂಎಂಎಲ್), ಬಾಕ್ಸೈಟ್ ನಿಕ್ಷೇಪಗಳನ್ನು ಅಗೆದು ತೆಗೆಯುವ ಕೆಲಸದ ಜವಾಬ್ದಾರಿ ಹೊತ್ತುಕೊಂಡಿದೆ. ಈ ವಿಷಯವನ್ನು ಎಂಎಂಎಲ್ನ ಅಧ್ಯಕ್ಷ ಎಚ್. ರಾಮಕೃಷ್ಣ ಇತ್ತೀಚೆಗೆ ಸುದ್ದಿಗಾರರಿಗೆ ತಿಳಿಸಿದ್ದಾರೆ. ಸುಮಾರು 40 ಎಕರೆ ಪ್ರದೇಶದಲ್ಲಿ ಅಲ್ಯೂಮಿನಿಯಂ ಅದಿರು ಇರುವುದು ಪತ್ತೆಯಾಗಿದೆ. ಈ ಬಗೆಗಿನ ಮಾತುಕತೆಗಳೆಲ್ಲ ಮುಗಿದಿವೆ. ಸದ್ಯದಲ್ಲೇ ಎಂಎಂಎಲ್ ಕಂಪೆನಿ ಗಣಿಗಾರಿಕೆ ಆರಂಭಿಸಲಿದೆ.
ಕಂಪೆನಿಯು, ಪ್ರತಿವರ್ಷ ಸುಮಾರು 50 ಸಾವಿರ ಟನ್ ಬಾಕ್ಸೈಟ್ ನಿಕ್ಷೇಪಗಳನ್ನು ಭೂಗರ್ಭದಿಂದ ಹೊರತೆಗೆಯುವ ನಿರೀಕ್ಷೆಯಿಟ್ಟುಕೊಂಡಿದೆ. ಬೈಂದೂರಿನ ಆಸುಪಾಸಿನಲ್ಲಿ ಪತ್ತೆಯಾಗಿರುವ ಬಾಕ್ಸೈಟ್ ನಿಕ್ಷೇಪಗಳು ಉತ್ತಮ ಗುಣಮಟ್ಟದ್ದಾಗಿದೆ. ಅಲ್ಲದೆ ಈ ಅದಿರು ಗಲ್ಫ್ ದೇಶಗಳ ಸಿಮೆಂಟ್ ತಯಾರಿಕಾ ಕಂಪೆನಿಗಳಿಗೆ ರಫ್ತುಮಾಡಲು ಅರ್ಹವಾಗಿದೆ ಎಂದು ರಾಮಕೃಷ್ಣ ಹೇಳಿದರು.
ಸರಕಾರೀ ಕಟ್ಟಡಗಳಿಗೆ, ಹುಡ್ಕೋ, ಕರ್ನಾಟಕ ಹೌಸಿಂಗ್ ಬೋರ್ಡ್, ಕೆಪಿಟಿಸಿಎಲ್, ಪಿಡಬ್ಲ್ಯುಡಿ ಕಾಮಗಾರಿಗಳಿಗೆ ಈ ಅದಿರನ್ನು ಬಳಸಿಕೊಳ್ಳುವ ಬಗ್ಗೆಯೂ ಸರಕಾರ ಯೋಚಿಸಬೇಕು ಎಂದು ರಾಮಕೃಷ್ಣ ಸರಕಾರವನ್ನು ಆಗ್ರಹಿಸಿದರು.
(ಇನ್ಫೋ ವಾರ್ತೆ)