ಉರ್ದು ವಾರ್ತೆ : ವಸತಿ ಸಚಿವರ ಹೇಳಿಕೆಗೆ ಶೆಟ್ಟರ್ ಖಂಡನೆ
ಬೆಂಗಳೂರು: ಬೆಂಗಳೂರು ದೂರದರ್ಶನ ಕೇಂದ್ರ ಉರ್ದು ವಾರ್ತೆ ಪ್ರಸಾರ ಮಾಡಬೇಕು ಎಂದು ಒತ್ತಾಯಿಸುವ ಮೂಲಕ ರಾಜ್ಯ ವಸತಿ ಸಚಿವ ಖಮರುಲ್ಲಾ ಇಸ್ಲಾಂ ಕೋಮು ಗಲಭೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ್ ಆರೋಪಿಸಿದ್ದಾರೆ.
ಭಾಷೆ ಮತ್ತು ಮತೀಯ ಭಾವನೆಗಳನ್ನು ಕೆಣಕಿದರೆ ಪರಿಸ್ಥಿತಿ ಪ್ರಕೋಪಕ್ಕೆ ಹೋಗುತ್ತದೆ. ಕೇವಲ ಕೀಳು ಮಟ್ಟದ ತಂತ್ರದಿಂದ ಪ್ರಚಾರ ಗಿಟ್ಟಿಸಲು ನೀಡುವ ಇಂಥ ಹೇಳಿಕೆಗಳು, ರಾಜ್ಯದ ಶಾಂತಿಯನ್ನೇ ಭಂಗಗೊಳಿಸುತ್ತದೆ ಎಂದು ಶೆಟ್ಟರ್ ಹೇಳಿದ್ದಾರೆ. ರಾಜ್ಯದ ಶಾಂತಿಗೆ ಧಕ್ಕೆ ತರುವಂತಹ ಹೇಳಿಕೆ ನೀಡದಂತೆ ತಮ್ಮ ಸಂಪುಟದ ಸಚಿವರನ್ನು ಮುಖ್ಯಮಂತ್ರಿಗಳು ಹತೋಟಿಯಲ್ಲಿಟ್ಟುಕೊಳ್ಳಬೇಕು ಎಂದೂ ಅವರು ಆಗ್ರಹಿಸಿದ್ದಾರೆ.
1994ರಲ್ಲಿ ಉರ್ದು ವಾರ್ತೆ ಪ್ರಸಾರವಾದಾಗ ರಾಜ್ಯದಲ್ಲಿ ಕೋಮು ಗಲಭೆ ಸಂಭವಿಸಿದ್ದು, ಸಚಿವರಿಗೆ ಮರೆತು ಹೋಗಿದೆಯೇ ಎಂದು ಶೆಟ್ಟರ್ ಪ್ರಶ್ನಿಸಿದ್ದಾರೆ. ಸಚಿವರು ಈಗಲಾದರೂ ಬುದ್ಧಿ ಕಲಿಯದಿದ್ದರೆ ಸರಕಾರ ಮುಂದೆ ಪರಿತಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಖಂಡನೆ : ಕನ್ನಡ ಸಂಘರ್ಷ ಸಮಿತಿ, ಬೆಂಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ ಹಲವು ಕನ್ನಡ ಪರ ಸಂಘಟನೆಗಳು ಖಮರುಲ್ಲಾ ಇಸ್ಲಾಂ ಅವರ ಹೇಳಿಕೆಯನ್ನು ಖಂಡಿಸಿದ್ದು, ಮುಂದೆಂದೂ ಇಂಥ ಕ್ಷುಲ್ಲಕ ಹೇಳಿಕೆ ನೀಡದಂತೆ ಒತ್ತಾಯಿಸಿವೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...