‘ಕಾಶ್ಮೀರ ವಿಷಯದಲ್ಲಿ ಮೂರನೆಯವರ ಮಧ್ಯಸ್ಥಿಕೆ ಭಾರತ ಒಪ್ಪದು’
ನವದೆಹಲಿ: ಭಾರತ ಹಾಗೂ ಪಾಕಿಸ್ತಾನ ನಡುವಣ ಬಾಂಧವ್ಯದಲ್ಲಿ ಕಾಶ್ಮೀರ ವಿಷಯವೇ ಕೇಂದ್ರ ಬಿಂದು ಎಂದು ಅಮೆರಿಕದ ವಿದೇಶಾಂಗ ಸಚಿವ ಕಾಲಿನ್ ಪೊವೆಲ್ ಇಸ್ಲಾಮಾಬಾದ್ನಲ್ಲಿ ನೀಡಿರುವ ಹೇಳಿಕೆಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಭಾರತಕ್ಕೆ ಆಗಮಿಸಿರುವ ಪೊವೆಲ್ ಅವರೊಂದಿಗೆ 50 ನಿಮಿಷಗಳ ಕಾಲ ಮಾತುಕತೆ ನಡೆಸಿದ ವಿದೇಶಾಂಗ ಸಚಿವ ಜಸ್ವಂತ್ ಸಿಂಗ್, ಕಾಶ್ಮೀರ ವಿಷಯದಲ್ಲಿ ಮುಷ್ರಫ್ ಅಭಿಪ್ರಾಯವನ್ನು ಬೆಂಬಲಿಸಿದ ಪೊವೆಲ್ ನಿಲುವಿಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ವಿದೇಶಾಂಗ ಇಲಾಖೆ ವಕ್ತಾರರಾದ ನಿರುಪಮಾ ರಾವ್ ತಿಳಿಸಿದ್ದಾರೆ.
ಭಾರತದ ಆದ್ಯತೆಯ ವಿಷಯಗಳಾವುವು ಎಂಬುದು ಅಮೆರಿಕಕ್ಕೇ ಚೆನ್ನಾಗಿ ತಿಳಿದಿದೆ ಎಂದು ಹೇಳಿದ ಜಸ್ವಂತ್ ಸಿಂಗ್, ಕಾಶ್ಮೀರ ವಿಷಯದಲ್ಲಿ ಮೂರನೆಯವರ ಮಧ್ಯಸ್ಥಿಕೆಯನ್ನು ಭಾರತ ಒಪ್ಪುವುದಿಲ್ಲ ಎಂಬುದನ್ನು ಪೊವೆಲ್ ಅವರಿಗೆ ಸ್ಪಷ್ಟಪಡಿಸಿದರು ಎಂದೂ ರಾವ್ ಹೇಳಿದ್ದಾರೆ.
ಬೆಂಬಲ : ಈ ಮಧ್ಯೆ ತಮ್ಮ 50 ನಿಮಿಷಗಳ ನೇರ ಭೇಟಿ ಹಂತದಲ್ಲಿ ಅಂತಾರಾಷ್ಟ್ರೀಯ ಭಯೋತ್ಪಾದನೆ ವಿರುದ್ಧ ನಡೆದಿರುವ ವಿಶ್ವಯುದ್ಧವನ್ನು ಬಲಪಡಿಸುವ ಬಗ್ಗೆ ಪರಸ್ಪರ ಒಪ್ಪಿಗೆ ಸೂಚಿಸಲಾಯಿತು. ಯುದ್ಧಾನಂತರ ಆಫ್ಘಾನಿಸ್ತಾನದಲ್ಲಿ ವಿಸ್ತುತ ಹಾಗೂ ಬಹು - ಜನಾಂಗೀಯ ಪ್ರಾತಿನಿಧ್ಯದ ಸರಕಾರ ರಚನೆ ಬಗ್ಗೆಯೂ ಚರ್ಚಿಸಲಾಯಿತು.
ಈ ಇಬ್ಬರು ನಾಯಕರ ನಡುವಿನ ನಿಯೋಗ ಮಟ್ಟದ ಮಾತುಕತೆ ಫಲಪ್ರದವಾಗಿದ್ದು, ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಬಲಗೊಂಡಿದೆ ಎಂದು ವಕ್ತಾರರು ತಿಳಿಸಿದ್ದಾರೆ. ಬುಧವಾರ ಪೊವೆಲ್ ಹಾಗೂ ಗೃಹ ಸಚಿವ ಎಲ್.ಕೆ. ಆಡ್ವಾಣಿ ಅವರ ನಡುವೆ ಮಾತುಕತೆ ನಡೆಯಲಿದೆ.
(ಪಿ.ಟಿ.ಐ/ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...