ಮದರಸಾ ವಿದ್ಯಾರ್ಥಿಗಳಿಗೊಂದಿಷ್ಟು ಗಣಿತ, ವಿಜ್ಞಾನ, ಸಮಾಜ ಪಾಠ
ಬೆಂಗಳೂರು : ಮದರಸಾದಲ್ಲಿ ಓದುತ್ತಿರುವ ಮಕ್ಕಳನ್ನು ಶಿಕ್ಷಣದ ಮುಖ್ಯವಾಹಿನಿಗೆ ಸೇರಿಸುವ ದೃಷ್ಠಿಯಿಂದ ಮದರಸಾ ಮಂಡಳಿ ಸ್ಥಾಪಿಸಲು ರಾಜ್ಯ ಸರಕಾರ ನಿರ್ಧರಿಸಿದೆ.
ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಸಚಿವ ಎಚ್. ವಿಶ್ವನಾಥ್ ಮಂಗಳವಾರ ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದರು. ರಾಜ್ಯ ಸಚಿವ ಸಂಪುಟ ಮದರಸಾ ಮಂಡಳಿ ಸ್ಥಾಪಿಸುವ ಪ್ರಸ್ತಾವನೆಯನ್ನು ಒಪ್ಪಿದೆ. ಆದರೆ ಮಂಡಳಿ ಅನುಸರಿಸಬೇಕಾದ ನಿಯಮಾವಳಿಗಳನ್ನು ಇನ್ನೂ ಸಿದ್ಧಪಡಿಸಿಲ್ಲ. ವಕ್ಫ್ ಮಂಡಳಿ, ಸಮಾಜ ಕಲ್ಯಾಣ ಮತ್ತು ಶಿಕ್ಷಣ ಇಲಾಖೆ ವಿಭಾಗದ ಅಧಿಕಾರಿಗಳನ್ನು ಈ ಮಂಡಳಿಯ ಸದಸ್ಯರನ್ನಾಗಿ ನೇಮಿಸಿಕೊಳ್ಳಲಾಗುವುದು ಎಂದು ಸಚಿವರು ಹೇಳಿದರು.
ಮದರಸಾದಲ್ಲಿ ಓದುವ ಮಕ್ಕಳು ಅರೆಬಿಕ್, ಮತ್ತು ಇಸ್ಲಾಂ ಮತಕ್ಕೆ ಸಂಬಂಧಿಸಿದ ವಿಷಯಗಳನ್ನು ಮಾತ್ರ ಓದುತ್ತಾರೆ. ಮಂಡಳಿಯ ನಿಯಮಾವಳಿಯ ಅಡಿಯಲ್ಲಿ ಈ ವಿದ್ಯಾರ್ಥಿಗಳಿಗೆ ಇಂಗ್ಲಿಷ್, ಕನ್ನಡ, ಗಣಿತ ಮತ್ತು ವಿಜ್ಞಾನವನ್ನು ಕಲಿಸಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ಮುಂದೆ ಸಮಾಜವನ್ನು ಎದುರಿಸುವುದು ಸುಲಭವಾಗುತ್ತದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ 371 ನೋಂದಾಯಿತ ಮದರಸಾಗಳಿವೆ. ಇದಲ್ಲದೆ ನೋಂದಾವಣೆ ಆಗದೇ ಇರುವ ಮದರಸಾಗಳು ಸಾಕಷ್ಟಿವೆ ಎಂದ ಸಚಿವರು, ಕಳೆದ ಒಂದುವರೆ ವರ್ಷಗಳಿಂದ 240 ಮದರಸಾಗಳಿಗೆ ಸರಕಾರ ಆರ್ಥಿಕ ಸಹಾಯ ನೀಡುತ್ತಿದೆ. ಪ್ರಸ್ತುತ ಮದರಸಾಗಳಿಗೆ ನೆರವು ನೀಡಲು ರಾಜ್ಯ 25 ಲಕ್ಷ ರೂಪಾಯಿಗಳನ್ನು ಎತ್ತಿಟ್ಟಿದೆ. ಮದರಸಾ ಶಾಲೆಗಳಲ್ಲಿ ಶಿಕ್ಷಣ ಮಟ್ಟವನ್ನು ಸುಧಾರಿಸುವುದರ ಜೊತೆಗೆ, ಸಂಸ್ಕೃತ ಶಾಲೆಗಳಲ್ಲಿಯೂ ಶಿಕ್ಷಣ ವ್ಯವಸ್ಥೆ ಸುಧಾರಿಸಲು ಸರ್ಕಾರ ಸಹಕರಿಸಲಿದೆ ಎಂದರು.
ಕೇವಲ ಸಂಸ್ಕೃತ ಪಾಠ ನಡೆಯುವ ಶಾಲೆಗಳಿಗೆ ನೆರವು ನೀಡಲು ಕೇಂದ್ರವು 48 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಆದರೆ ರಾಜ್ಯದಲ್ಲಿರುವುದು ಬೆರಳೆಣಿಕೆಯಷ್ಟು ಸಂಸ್ಕೃತ ಶಾಲೆಗಳು ಮಾತ್ರ ಎಂದು ಸಚಿವರು ವಿಷಾದಿಸಿದರು.
(ಇನ್ಫೋ ವಾರ್ತೆ)