ನೀರಾವರಿಯೋಜನೆಗಳಿಗೆ ಸಾಲ ಎತ್ತುವ ಪ್ರಸ್ತಾವನೆಗೆಸರ್ಕಾರದ ಸಮ್ಮತಿ
ಬೆಂಗಳೂರು : ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲದೆ ಇತರೆ ನೀರಾವರಿ ಯೋಜನೆಗಳ ಜಾರಿಗೆ 125 ಕೋಟಿ ರುಪಾಯಿ ಹಣ ಸಾಲ ಪಡೆಯಲು ಲೇವಾದೇವಿ ಮಾರುಕಟ್ಟೆ ಪ್ರವೇಶಿಸಬೇಕೆಂಬ ಕರ್ನಾಟಕ ನೀರಾವರಿ ನಿಗಮ ನಿಯಮಿತ (ಕೆಎನ್ಎನ್ಎಲ್) ದ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ಅನುಮೋದಿಸಿದೆ.
ಬುಧವಾರ ಸಚಿವ ಸಂಪುಟ ತೆಗೆದುಕೊಂಡ ನಿರ್ಣಯಗಳನ್ನು ಸುದ್ದಿಗಾರರಿಗೆ ಮುಟ್ಟಿಸಿದ ವಾರ್ತಾ ಸಚಿವ ಎಂ.ಶಿವಣ್ಣ ಈ ವಿಷಯ ತಿಳಿಸಿದರು. ಘಟಪ್ರಭಾ, ಮಲಪ್ರಭಾ, ಸಿಂಗಟಾಲೂರು ಹಾಗೂ ತುಂಗಾ ಏತ ನೀರಾವರಿ ಯೋಜನೆಗಳಿಗೆ ಹಣ ಪೂರೈಸಲು ಸರ್ಕಾರದ ಮುಂದೆ ಕೆಎನ್ಎನ್ಎಲ್ ಈ ಪ್ರಸ್ತಾವನೆಯನ್ನು ಇಟ್ಟಿತ್ತು ಎಂದರು.
ಆರೋಗ್ಯಕ್ಕೆ ಭಾರೀ ಒತ್ತು : ವಿಶ್ವಬ್ಯಾಂಕ್ನ 590 ಕೋಟಿ ರುಪಾಯಿ ನೆರವಿನಲ್ಲಿ ಹಮ್ಮಿಕೊಂಡಿರುವ ಕರ್ನಾಟಕ ಆರೋಗ್ಯ ವ್ಯವಸ್ಥೆ ಅಭಿವೃದ್ಧಿ ಯೋಜನೆಯನ್ನು ವಿಸ್ತರಿಸಲು ಸಚಿವ ಸಂಪುಟ ತೀರ್ಮಾನಿಸಿತು. ಯೋಜನೆಯನ್ನು ವಿಸ್ತರಿಸುವುದರಿಂದ ಸಾಲದ ಹಣದ ಪೂರ್ಣ ಬಳಕೆ ಸಾಧ್ಯವಾಗಲಿದೆ. 1996- 97ರಲ್ಲಿ ಜಾರಿಗೆ ಬಂದ ಈ ಯೋಜನೆಯಡಿ 200 ದ್ವಿತೀಯ ದರ್ಜೆ ಆಸ್ಪತ್ರೆಗಳ ಗುಣಮಟ್ಟ ಸುಧಾರಿಸುವ ಕೆಲಸಕ್ಕೆ ಸರ್ಕಾರ ಕೈಹಾಕಿದೆ. ಈ ಪೈಕಿ 130 ಆಸ್ಪತ್ರೆಗಳ ವ್ಯವಸ್ಥೆ ಈಗಾಗಲೇ ಸುಧಾರಿಸಿದ್ದು, 450 ಕೋಟಿ ರುಪಾಯಿ ಖರ್ಚಾಗಿದೆ. ಯೋಜನೆಯ ಮುಂದಿನ ಹಂತದ ಉಸ್ತುವಾರಿಯನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೋಡಿಕೊಳ್ಳಲಿದ್ದಾರೆ ಎಂದು ಸಚಿವರು ಹೇಳಿದರು.
(ಪಿಟಿಐ)