‘ಸರ್ಕಾರಿ ಸ್ವಾಮ್ಯದ 15 ಉದ್ದಿಮೆಗಳಿಗೆ ಬೀಗ ಅಥವಾ ಖಾಸಗೀಕರಣ’
ಬೆಂಗಳೂರು :ರಾಜ್ಯ ಸರ್ಕಾರಿ ಸ್ವಾಮ್ಯದ ಸೊರಗುತ್ತಿರುವ ಉದ್ದಿಮೆಗಳನ್ನು ವಿಶ್ವಬ್ಯಾಂಕ್ ನೆರವು ಪಡೆದು ಪುನರುಜ್ಜೀವನಗೊಳಿಸಲಾಗುವುದು ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕೆ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಬುಧವಾರ ಪ್ರೆಸ್ ಕ್ಲಬ್ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಅವರು ಮಾತಾಡುತ್ತಿದ್ದರು. ಮಾರ್ಚ್ 31, 2002ರ ಹೊತ್ತಿಗೆ ಸರ್ಕಾರಿ ಸ್ವಾಮ್ಯದ 15 ಉದ್ದಿಮೆಗಳನ್ನು ಖಾಸಗೀಕರಣಗೊಳಿಸಲಾಗುವುದು ಅಥವಾ ಮುಚ್ಚಲಾಗುವುದು. ಈ ಪೈಕಿ ಈಗಾಗಲೇ ಎರಡು ಕಾರ್ಖಾನೆಗಳಿಗೆ ಬೀಗ ಬಿದ್ದಿದೆ ಎಂದರು.
ಒಂದು ಕಾಲದಲ್ಲಿ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಕಂಪನಿಯಾಗಿದ್ದ ಎನ್ಜಿಇಎಫ್ ಪುನರುಜ್ಜೀವನಕ್ಕೆ ಜಾಗತಿಕ ಮಟ್ಟದಲ್ಲಿ ಟೆಂಡರ್ ಕರೆಯಲಾಗಿದೆ. ಈಗ ಎನ್ಜಿಇಎಫ್ ಸಾಲ ರಹಿತ ಕಂಪನಿಯಾಗಿದೆ. ಮೈಸೂರು ಲ್ಯಾಂಪ್ಸ್ ಖಾಸಗೀಕರಣಗೊಳುಸುವ ಪ್ರಯತ್ನಗಳು ಕೂಡ ನಡೆದಿವೆ. ಸರ್ಕಾರ ರಚಿಸಿರುವ ಸಾರ್ವಜನಿಕ ಉದ್ದಿಮೆಗಳ ಪುನರ್ನಿರ್ಮಾಣ ಆಯೋಗದ ವರದಿ ಪರಿಶೀಲಿಸಿದ ನಂತರ ಇತರೆ ಉದ್ದಿಮೆಗಳ ಖಾಸಗೀಕರಣ ಅಥವಾ ಬೀಗ ಹಾಕುವ ಬಗ್ಗೆ ನಿರ್ಧರಿಸಲಾಗುವುದು ಎಂದು ದೇಶಪಾಂಡೆ ತಿಳಿಸಿದರು.
ಸರ್ಕಾರಕ್ಕೆ ವ್ಯಾಪಾರ ಮಾಡುವಂಥಾ ವ್ಯಾಪಾರಿ ಧೋರಣೆ ಇಲ್ಲವಾದ್ದರಿಂದ ಇನ್ನು ಮುಂದೆ ಯಾವುದೇ ಹೊಸ ಉದ್ದಿಮೆಯನ್ನು ಪ್ರಾರಂಭಿಸುವುದಿಲ್ಲ. ಬದಲಿಗೆ ರಫ್ತು ಹೆಚ್ಚಿಸುವ ಸಲುವಾಗಿ ಮಂಗಳೂರಿನಲ್ಲೊಂದು ಪಾರ್ಕ್, ಚೀನಾ ಮಾದರಿಯಲ್ಲಿ ಹಾಸನದಲ್ಲೊಂದು ಆರ್ಥಿಕ ವಲಯ, ಮಾಲೂರು ಹಾಗೂ ಬಾಗಲಕೋಟೆಯಲ್ಲಿ ಕೃಷಿ ಮತ್ತು ಆಹಾರ ಸಂಸ್ಕರಣಾ ಉದ್ದಿಮೆಗಳ ಪಾರ್ಕ್, ದೊಡ್ಡಬಳ್ಳಾಪುರ ಮತ್ತು ಬಳ್ಳಾರಿಯಲ್ಲಿ ಜವಳಿ ಉದ್ದಿಮೆಗಳ ಪಾರ್ಕ್ ಸ್ಥಾಪಿಸಲಾಗುವುದು ಎಂದರು.
ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಕಬ್ಬಿಣ ಮತ್ತು ಉಕ್ಕು ಸಚಿವಾಲಯ ಜಂಟಿಯಾಗಿ ಬಳ್ಳಾರಿಯಲ್ಲಿ ಉಕ್ಕು ತಾಂತ್ರಿಕ ಸಂಸ್ಥೆಯನ್ನು ಪ್ರಾರಂಭಿಸುವ ಯೋಜನೆಯೂ ಇದೆ ಎಂದು ದೇಶಪಾಂಡೆ ಹೇಳಿದರು.
(ಪಿಟಿಐ)