ಮಹಿಳೆಯರ ಮಾರಾಟ! ಕಾಯ್ದೆಗೆ ತಿದ್ದುಪಡಿ ತಂದರೆ ನಿಂತೀತೆ?
ಬೆಂಗಳೂರು : ಕಾನೂನೆಂಬ ರಂಗೋಲಿಯಡಿ ತೂರುವ ಖದೀಮ ಕಳ್ಳರು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ , ಮಹಿಳೆಯರ ಅನೈತಿಕ ಮಾರಾಟ (ಪ್ರತಿಬಂಧಕಾ) ಕಾಯ್ದೆ (Immoral Trafficking in Women (Prevention)Act ) ಗೆ ತಿದ್ದುಪಡಿ ತರಲು ಕೇಂದ್ರ ಸರಕಾರ ಉದ್ದೇಶಿದೆ.
ಮಹಿಳೆಯರ ಅನೈತಿಕ ಮಾರಾಟ ಪ್ರತಿಬಂಧಕಾ ಕಾಯ್ದೆ ಇತ್ತೀಚಿನದೇನೂ ಅಲ್ಲ . 1980ರಲ್ಲೇ ಈ ಕಾಯ್ದೆ ಜಾರಿಗೆ ಬಂದಿದ್ದರೂ, ಪರಿಣಾಮಕಾರಿಯಾಗಿ ಜಾರಿಯಾದದ್ದು ಕಡಿಮೆ. ಕಾಯ್ದೆಯ ಉರುಳಿನಿಂದ ತಪ್ಪಿಸಿಕೊಳ್ಳುವ ಚಾಲಾಕಿಗಳಿಂದ ಹೊಸ ನಮೂನೆಯ ಅಪರಾಧಗಳು ಪತ್ತೆಯಾಗಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಭಾಗದ ಕಾರ್ಯದರ್ಶಿ ಡಾ. ಆರ್. ವಿ. ವೈದ್ಯನಾಥ ಅಯ್ಯರ್ ಕಾಯ್ದೆಯ ತಿದ್ದುಪಡಿ ಬಗೆಗೆ ಮಂಗಳವಾರ ಪಿಟಿಐಗೆ ತಿಳಿಸಿದ್ದಾರೆ.
ತಿದ್ದುಪಡಿ ಮಾಡುವುದರಿಂದ ವೇಶ್ಯಾವಾಟಿಕೆಗಾಗಿ ಮಹಿಳೆಯರನ್ನು ಬೇರೆ ರಾಜ್ಯಗಳಿಗೆ ಮಾರಾಟ ಮಾಡುವುದನ್ನು ಕಟ್ಟು ನಿಟ್ಟಾಗಿ ವಿರೋಧಿಸಲಾಗುತ್ತದೆ. ಕೇಂದ್ರ ಸರಕಾರವು ಕಾಯ್ದೆ ತಿದ್ದುಪಡಿಗೆ ಸಂಬಂಧ ಪಟ್ಟಂತೆ, ವಿವಿಧ ಕ್ಷೇತ್ರಗಳ ಎನ್ಜಿಒ ಪ್ರತಿನಿಧಿಗಳು ಸೇರಿದಂತೆ ರಾಜ್ಯ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿಯಾಂದನ್ನು ರಚಿಸಿ, ಕ್ರಿಯಾ ಯೋಜನೆಯನ್ನು ರೂಪುಗೊಳಿಸುವಂತೆ ರಾಜ್ಯ ಸರಕಾರಗಳಿಗೆ ಸೂಚಿಸಿದೆ ಎಂದು ಅಯ್ಯರ್ ಹೇಳಿದರು.
ಮಕ್ಕಳು ಮತ್ತು ಮಹಿಳೆಯರ ಸಾಗಾಟ ತಡೆಗಟ್ಟುವ ಕುರಿತು ನಗರಲ್ಲಿ ನಡೆದ ಪ್ರಾದೇಶಿಕ ಕಾರ್ಯಾಗಾರವೊಂದರಲ್ಲೂ ವೈದ್ಯನಾಥ ಅಯ್ಯರ್ ಭಾಗವಹಿಸಿದ್ದರು. ಕಮ್ಮಟದಲ್ಲಿ ಮಾತನಾಡಿದ ಅಯ್ಯರ್, ಮಹಿಳೆಯರ ಸಾಗಾಣಿಕೆ ಸಮಸ್ಯೆಯು ಕಣ್ಣಿಗೆ ಕಾಣಿಸುತ್ತಿರುವುದಕ್ಕಿಂತಲೂ ಆಳವಾಗಿದೆ ಹಾಗೂ ತೀರಾ ಗಂಭೀರವಾಗಿದೆ ಎಂದರು.
ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೋಟಮ್ಮ , ರಾಜ್ಯ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಎನ್. ಕೆ. ಜೈನ್ ಭಾಗವಹಿಸಿ ಸಮಸ್ಯೆ ವಿರುದ್ಧ ಹೋರಾಡುವಂತೆ ನಾಗರಿಕರಿಗೆ ಕರೆ ನೀಡಿದರು.
(ಇನ್ಫೋ ವಾರ್ತೆ)