ಕಾಶ್ಮೀರ : ಭಾರತದ ಸೇನಾ ದಾಳಿಗೆ 11 ಪಾಕ್ ನೆಲೆ ಧ್ವಂಸ
ನವದೆಹಲಿ: ‘ಜಮ್ಮು ಮತ್ತು ಕಾಶ್ಮೀರದಲ್ಲಿನ ಆಫ್ಘನ್ ಹಾಗೂ ಪಾಕ್ ಪ್ರಚೋದಿತ ಭಯೋತ್ಪಾದನೆ ವಿರುದ್ಧ ಸೇನಾ ಕಾರ್ಯಾಚರಣೆ ಅನಿವಾರ್ಯ’ ಎಂದು ಸಂಪುಟಕ್ಕೆ ಮರು ಸೇರ್ಪಡೆಯಾಗಿ, ರಕ್ಷಣೆಯ ಹೊಣೆಹೊತ್ತ ಜಾರ್ಜ್ ಫರ್ನಾಂಡಿಸ್ ಹೇಳಿದ ಕೆಲವೇ ಗಂಟೆಗಳಲ್ಲಿ ಭಾರತದ ದಾಳಿಗೆ ಪಾಕ್ನ 11 ನೆಲೆಗಳು ಧ್ವಂಸವಾಗಿವೆ.
ಜಮ್ಮು ಮತ್ತು ಕಾಶ್ಮೀರದ ಮೆಂಧರ್ ಮತ್ತು ಅಕ್ನೂರ್ ವಲಯದಲ್ಲಿ ಸೋಮವಾರ ರಾತ್ರಿ ಅತಿಕ್ರಮವಾಗಿ ಭಾರತ ಗಡಿಯಾಳಗೆ ನುಸುಳಲು ಯತ್ನಿಸುತ್ತಿದ್ದ ಭಯೋತ್ಪಾದಕರತ್ತ ಭಾರತ ಸೇನಾಪಡೆ ದಾಳಿ ನಡೆಸಿ, ಕನಿಷ್ಠ 12 ಉಗ್ರಗಾಮಿಗಳನ್ನು ಕೊಂದು ಹಾಕಿದೆ.
ಭಯೋತ್ಪಾದಕರ ಮೇಲೆ ಭಾರತ ಸೇನೆ ಗುಂಡು ಹಾರಿಸುತ್ತಿದ್ದಂತೆಯೇ ಪಾಕ್ ಸೈನಿಕರು ರಾಕೆಟ್ ಮತ್ತು ಭಾರಿ ಮಿಷಿನ್ ಗನ್ಗಳಿಂದ ಪ್ರತಿದಾಳಿ ನಡೆಸಿದರು. ಆದರೆ, ಭಾರತ ಸೈನಿಕರ ಸಮರ್ಥ ಷೆಲ್ ದಾಳಿಯಿಂದ 12 ಉಗ್ರರು ಸಾವನ್ನಪ್ಪಿದ್ದಲ್ಲದೆ, ಪಾಕ್ನ 11 ನೆಲೆಗಳು ಮತ್ತು ಬಂಕರ್ಗಳು ನಾಶವಾದವು.
ಸಂಯಮ ತೋರಿ - ಬುಷ್: ಭಯೋತ್ಪಾದನೆ ವಿರುದ್ಧ ಅಮೆರಿಕ ನೇತೃತ್ವದಲ್ಲಿ ಭಾರಿ ಸಮರವೇ ನಡೆಯುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಭಾರತ ಮತ್ತು ಪಾಕಿಸ್ತಾನಗಳೆರಡೂ ಸಂಯಮದಿಂದ ವರ್ತಿಸಬೇಕು ಎಂದು ಕಿವಿಮಾತು ಹೇಳಿದ್ದಾರೆ.
ಕಾಶ್ಮೀರ ಗಡಿಯಲ್ಲಿ ಗುಂಡಿನ ಚಕಮಕಿ ನಡೆದ ಸುದ್ದಿ ಹೊರಬಿದ್ದ ಕೂಡಲೇ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬುಷ್ ಎರಡೂ ರಾಷ್ಟ್ರಗಳಿಗೆ ತಾಳ್ಮೆಯಿಂದ ವರ್ತಿಸುವುದು ಅತಿ ಅವಶ್ಯಕ ಎಂದು ಅಭಿಪ್ರಾಯಪಟ್ಟಿದ್ದಾರೆ.
ಪಾಕ್ ಖಂಡನೆ : ಭಾರತೀಯ ಸೇನೆ ಅಪ್ರಚೋದಿತವಾಗಿ ದಾಳಿ ನಡೆಸಿದ್ದು, ಮಹಿಳೆಯಾಬ್ಬರು ಸಾವನ್ನಪ್ಪಿದ್ದು, 25 ನಾಗರಿಕರು ಗಾಯಗೊಂಡಿದ್ದಾರೆ ಎಂದು ಪಾಕ್ ಆರೋಪಿಸಿದೆ. ಸರಕಾರಿ ಪ್ರಚೋದಿತ ಭಯೋತ್ಪಾದನೆ ನಿಲ್ಲಿಸುವಂತೆ ಅದು ದೆಹಲಿ ಆಡಳಿತಕ್ಕೆ ಎಚ್ಚರಿಕೆ ನೀಡಿದೆ. ಸೇನಾ ವಕ್ತಾರ ಮೆ.ಜ. ರಷಿದ್ ಖುರೇಷಿ ದಾಳಿ ನಡೆದುದನ್ನು ದೃಢಪಡಿಸಿದ್ದಾರೆ.
(ಪಿ.ಟಿ.ಐ/ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...