ಅಡಿಕೆಗೆ ಬೆಂಬಲ ಬೆಲೆ : ರಾಜ್ಯದ ಸಹಕಾರಕ್ಕೆ ಪೂರಕವಾಗಿ ಕೇಂದ್ರದ ನೆರವು
ಮಂಗಳೂರು : ದರ ಕುಸಿತದಿಂದ ಕಂಗಾಲಾಗಿರುವ ಅಡಿಕೆ ಬೆಳೆಗೆ ರಾಜ್ಯ ಸರಕಾರ ಬೆಂಬಲ ಬೆಲೆ ಘೋಷಿಸಿದಲ್ಲಿ, ಕೇಂದ್ರ ಸರಕಾರವೂ ಸಂಪೂರ್ಣ ಬೆಂಬಲ ನೀಡಲು ಸಿದ್ಧವಾಗಿದೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವ ಅನಂತಕುಮಾರ್ ಭರವಸೆ ನೀಡಿದ್ದಾರೆ.
ಅವರು ಸೋಮವಾರ ಕ್ಯಾಂಪ್ಕೋ ಕಂಪೆನಿಗೆ ಭೇಟಿ ನೀಡಿ, ಅಲ್ಲಿನ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು. ಅಡಿಕೆ ಬೆಳೆಗಾರರ ಸಮಸ್ಯೆಗಳ ಪರಿಹರಿಸಲು ರಾಜ್ಯ ಸರಕಾರ ತೆಗೆದುಕೊಳ್ಳುವ ಕ್ರಮಗಳಿಗೆ ಪೂರಕವಾಗಿ ಕೇಂದ್ರವೂ ಸಹಾಯ ಮಾಡಲಿದೆ ಎಂದು ಸಚಿವರು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಸಚಿವ ವಿ. ಧನಂಜಯ ಕುಮಾರ್ ಕೂಡ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದ್ದಾರೆ ಎಂದು ಅನಂತ್ ಕುಮಾರ್ ಹೇಳಿದರು.
ಅಡಿಕೆ ಮಾರುಕಟ್ಟೆಯ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು, ನಿರ್ದಿಷ್ಟ ಯೋಜನೆಗಳನ್ನು ತಯಾರಿಸುವ ನಿಟ್ಟಿನಲ್ಲಿ ಕರಾವಳಿಯ ಎರಡೂ ಜಿಲ್ಲೆಗಳ ಶಾಸಕರು ಮತ್ತು ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷರು ದೆಹಲಿಯಲ್ಲಿ ಒಂದು ಸಭೆ ನಡೆಸುವಂತೆ ಸಲಹೆ ಮಾಡಿದ ಅನಂತ ಕುಮಾರ್ ಪರಂಪರಾಗತವಾಗಿ ನಮ್ಮ ದೇಶದಲ್ಲಿ ಬಳಕೆಯಲ್ಲಿರುವ ಅಡಿಕೆಯನ್ನು ಕಾಪಾಡಿದಲ್ಲಿ ಒಂದು ಸಂಸ್ಕೃತಿಯನ್ನು ಉಳಿಸಿದಂತಾಗುತ್ತದೆ ಎಂದರು.
ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ , ವಿಧಾನ ಪರಿಷತ್ ಸದಸ್ಯ ಡಾ. ವಿ.ಎಸ್. ಆಚಾರ್ಯ, ಬಾಲಕೃಷ್ಣ ಭಟ್ ಮತ್ತು ಶಾಸಕ ರುಕ್ಮಯ ಪೂಜಾರಿ ಈ ಸಂದರ್ಭದಲ್ಲಿ ಹಾಜರಿದ್ದರು.
(ಇನ್ಫೋ ವಾರ್ತೆ)