ಎಡನೀರು ಮಠದಲ್ಲಿ ಕೇಶವಾನಂದಸ್ವಾಮೀಜಿಗಳಿಗೆ ಗುರುವಂದನೆ
ಕಾಸರಗೋಡು : ಗುರುವಿನ ಮೂಲಕ ಬದುಕಿನ ಅರ್ಥವನ್ನು ತಿಳಿದುಕೊಂಡು ಉನ್ನತಿ ಹೊಂದಿದಾಗ, ದಾರಿ ತೋರಿದ ಗುರುವನ್ನು ಸ್ಮರಿಸುವ ಗುರುವಂದನಾ ಪದ್ಧತಿ ಅತ್ಯಂತ ಶ್ರೇಷ್ಠವಾದುದು ಎಂದು ಬೇಲಿಮಠ ಚರಮೂರ್ತಿ ಶಿವರುದ್ರ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಅವರು ಎಡನೀರು ಮಠದಲ್ಲಿ ಭಾನುವಾರ ನಡೆದ ಎಡನೀರು ಮಠಾಧೀಶ ಕೇಶಾವನಂದ ಭಾರತಿ ಸ್ವಾಮೀಜಿಯ 60ನೇ ವರ್ಧಂತಿ ಉತ್ಸವದಲ್ಲಿ ಮಾತನಾಡುತ್ತಿದ್ದರು. ಶಿಷ್ಯವರ್ಗದ ಏಳ್ಗೆಯನ್ನೇ ಬಯಸುವ ಗುರು ಋಣ ತೀರಿಸುವುದು ಕಷ್ಟಸಾಧ್ಯ. ಕೇಶವಾನಂದ ಸ್ವಾಮೀಜಿಗಳ 60ನೇ ಹುಟ್ಟು ಹಬ್ಬವನ್ನು ಆಚರಿಸುವ ಮೂಲಕ ಅವರ ಶಿಷ್ಯವರ್ಗ ಗುರುವಂದನೆ ಸಲ್ಲಿಸುವ ಪ್ರಯತ್ನ ನಡೆಸಿರುವುದು ಶ್ಲಾಘನಾರ್ಹ ಎಂದ ಶಿವರುದ್ರ ಸ್ವಾಮೀಜಿ, ಕೇಶಾವನಂದ ಸ್ವಾಮೀಜಿಗಳಿಗೆ ಹಾಗೂ ಶಿಷ್ಯವೃಂದಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ನಾಗಸಂದ್ರ ಮಠಾಧೀಶ ಸಿದ್ಧಲಿಂಗ ಸ್ವಾಮಿ, ಕಾಂಞಂಗಾಡು ಆನಂದಾಶ್ರಮದ ಸ್ವಾಮೀ ಮುಕ್ತಾನಂದರು ಕೇಶಾವನಂದ ಸ್ವಾಮೀಜಿಗಳನ್ನು ಅಭಿನಂದಿಸಿದರು. ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಅನಂತಕೃಷ್ಣ ಮುಖ್ಯ ಅತಿಥಿಗಳಾಗಿದ್ದರು. ಸಮರಾಂಭದ ಬಳಿಕ ಯಕ್ಷಕೂಟ, ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು, ಉಜಿರೆ ಹಾಗೂ ತೆಂಕು-ಬಡಗುತಿಟ್ಟಿನ ಪ್ರಖ್ಯಾತ ಕಲಾವಿದರ ಕೂಡುವಿಕೆ ಯಿಂದ ಯಕ್ಷಗಾನ ಬಯಲಾಟ ನಡೆಯಿತು.
(ಇನ್ಫೋ ವಾರ್ತೆ)