ನೀರಾ ರಕ್ಷಣೆ ಪ್ರಾತ್ಯಕ್ಷಿಕೆಗೆ ರೈತಸಂಘದಿಂದ ಮುಖ್ಯಮಂತ್ರಿಗಳಿಗೆ ಆಹ್ವಾನ
ಬೆಂಗಳೂರು : ನೀರಾವನ್ನು ಸರಕಾರ ಮಾನ್ಯ ಮಾಡುವವರೆಗೆ ಹೋರಾಟದಿಂದ ಹಿಂತೆಗೆಯುವುದಿಲ್ಲ ಎಂದು ಪಣತೊಟ್ಟಿರುವ ರಾಜ್ಯ ರೈತ ಸಂಘ, ನೀರಾ ಕೆಡದಂತೆ ರಕ್ಷಿಸುವುದು ಹೇಗೆಂದು ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರಿಗೆ ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಡಲು ನಿರ್ಧರಿಸಿದೆ.
ಅಕ್ಟೋಬರ್ 16ರಂದು ನಗರದ ಗಾಂಧಿ ಪ್ರತಿಮೆಯ ಮುಂದೆಯೇ ನೀರಾವನ್ನು ಸಂರಕ್ಷಿಸುವುದು ಹೇಗೆ ಎಂಬುದನ್ನು ಸಾರ್ವಜನಿಕರಿಗೆ ವಿವರಿಸಲಾಗುವುದು. 1974ರಿಂದಲೇ ಲಭ್ಯವಿರುವ ನೀರಾ ಸಂರಕ್ಷಣಾ ತಂತ್ರಜ್ಞಾನದ ಬಗ್ಗೆ ಅರಿವಿದ್ದರೂ, ಏನೂ ತಿಳಿಯದವರಂತೆ ನಟಿಸುತ್ತಿರುವ ಮುಖ್ಯಮಂತ್ರಿಗಳಿಗೆ ರೈತರ ಹಿತರಕ್ಷಣೆ ಬಗ್ಗೆ ಕಾಳಜಿ ಇದ್ದರೆ ಗಾಂಧಿ ಪ್ರತಿಮೆಯ ಬಳಿಗೆ ಬರಲಿ ಎಂದು ರೈತ ಸಂಘದ ಅಧ್ಯಕ್ಷ ಪ್ರೊ. ನಂಜುಂಡ ಸ್ವಾಮಿ ಕೃಷ್ಣ ಅವರಿಗೆ ಆಹ್ವಾನ ನೀಡಿದ್ದಾರೆ.
ಅಲ್ಲದೆ, ವಿಠಲೇನ ಹಳ್ಳಿಯಲ್ಲಿ ಎರಡು ವಾರಗಳ ಹಿಂದ ನಡೆದ ಗೋಲಿಬಾರ್ ದುರ್ಘಟನೆ ಸಂಬಂಧ ಸರಕಾರ ಜಿಲ್ಲೆಯ ರೈತರ ಬಳಿ ಕ್ಷಮೆ ಕೇಳಬೇಕೆಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿ ರೈತ ಸಂಘ ಕಳೆದ ಎರಡು ದಿನಗಳಿಂದ ನಡೆಸುತ್ತಿರುವ ಧರಣಿ ಸೋಮವಾರವೂ ಮುಂದುವರೆದಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...