ಎರಡು ದಶಕಗಳಿಂದ ನೆನೆಗುದಿಯಲ್ಲಿದ್ದ 12 ನೀರಾವರಿಯೋಜನೆ ಪೂರ್ಣ
ಬೆಂಗಳೂರು : ಕಳೆದ ಎರಡು ದಶಕಗಳಿಂದ ಬಾಕಿ ಉಳಿದಿದ್ದ ರಾಜ್ಯದ ಹನ್ನೆರಡು ಮಧ್ಯಮ ನೀರಾವರಿ ಯೋಜನೆಗಳು ಪೂರ್ಣಗೊಂಡಿವೆ ಎಂದು ನೀರಾವರಿ ಸಚಿವ ಎಚ್. ಕೆ. ಪಾಟೀಲ್ ಸೋಮವಾರ ಹೇಳಿದ್ದಾರೆ.
ಪ್ರೆಸ್ಕ್ಲಬ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡುತ್ತಿದ್ದ ಅವರು, 2,125 ಕೋಟಿ ರೂಪಾಯಿಯ ಅಗತ್ಯವಿದ್ದುದರಿಂದ ಬಾಕಿ ಉಳಿದಿದ್ದ ಈ ಯೋಜನೆಗಳ ಕಾಮಗಾರಿ ಮುಗಿದಿದೆ. ಇದರಿಂದಾಗಿ 4.10 ಲಕ್ಷ ಎಕರೆ ಹೆಚ್ಚುವರಿ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ ಎಂದು ಪಾಟೀಲ್ ಹೇಳಿದರು.
ಪ್ರಸ್ತುತ ಪೂರ್ಣಗೊಂಡಿರುವ ಹನ್ನೆರಡು ಮಧ್ಯಮ ನೀರಾವರಿ ಯೋಜನೆಗಳು ಎರಡು ದಶಕದ ಹಿಂದೆಯೇ ಆರಂಭವಾಗಿದ್ದವು. ಆದರೆ ಸಂಪನ್ಮೂಲಗಳ ಕೊರತೆಯಿಂದ ಕಾಮಗಾರಿ ತೀರಾ ನಿಧಾನ ಗತಿಯಲ್ಲಿ ಸಾಗಿತ್ತು. ಈ ಯೋಜನೆಗಳು ಮುಂದಿನ ತಿಂಗಳು ಉದ್ಘಾಟನೆಯಾಗಲಿವೆ ಎಂದು ಪಾಟೀಲ್ ತಿಳಿಸಿದರು.
ನೀರಾವರಿ ವಿಭಾಗದಲ್ಲಿ ಸಾಕಷ್ಟು ಆಡಳಿತಾತ್ಮಕ ಸುಧಾರಣಾ ಕ್ರಮಗಳನ್ನು ಸರಕಾರ ಕೈಗೊಂಡಿದ್ದು, ಕಾಮಗಾರಿಗಳು ವೇಗದ ಗತಿಯಲ್ಲಿ ಸಾಗುವ ವಾತಾವರಣವನ್ನು ಕಲ್ಪಿಸಿದೆ. ಮುಖ್ಯವಾಗಿ ನೀರಾವರಿ ವಿಭಾಗದಲ್ಲಿ ಕೆಲಸ ಮಾಡುವ ಅಧಿಕಾರಿಗಳಿಗೆ ಯಾವುದೇ ರಾಜಕೀಯ ಒತ್ತಡಗಳಿರದಂತೆ ನೋಡಿಕೊಂಡಿರುವುದೇ ಸರಕಾರದ ಶ್ಲಾಘನಾರ್ಹ ಕೆಲಸ. 2005ನೇ ಇಸವಿಯಾಳಗೆ ಪ್ರಸ್ತುತ ಪ್ರಗತಿಯಲ್ಲಿರುವ ಎಲ್ಲ ಯೋಜನೆಗಳನ್ನು ಸಂಪೂರ್ಣಗೊಳಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
(ಪಿಟಿಐ)