ಇದು ಹಸಿಬರ !ಅತಿವೃಷ್ಟಿಯಲ್ಲಿ ಕೊಚ್ಚಿ ಹೋದ ಕೊಪ್ಪಳ ರೈತ !
ಕೊಪ್ಪಳ : ಕೈಕೊಟ್ಟ ಮುಂಗಾರಿನಿಂದ ಕಂಗಾಲಾಗಿದ್ದ ರೈತರ ಪಾಲಿಗೆ ತಡವಾಗಿ ಬಂದ ಜೋರು ಮಳೆಯೂ ದುಸ್ವಪ್ನವಾಗಿದೆ. ಹತ್ತಿ, ಮೆಕ್ಕೆಜೋಳ, ಈರುಳ್ಳಿ, ಮೆಣಸಿನಕಾಯಿ ಮತ್ತಿತರ ಬೆಳೆ ಬೆಳೆದ ರೈತರು ತಲೆ ಮೇಲೆ ಕೈಹೊತ್ತಿದ್ದಾರೆ.
ಕೊಪ್ಪಳ ಜಿಲ್ಲೆಯ ಅನೇಕ ಹಳ್ಳಿಗಳಲ್ಲಿ ಈರುಳ್ಳಿ ಬೆಳೆ ನಾಶವಾಗಿದ್ದು, ಪ್ರತಿ ರೈತ ಕನಿಷ್ಠ ತಲಾ 30 ಸಾವಿರ ರುಪಾಯಿ ಕಳಕೊಂಡಿದ್ದಾನೆ. ಭಾರೀ ನಿರೀಕ್ಷೆಯಲ್ಲಿ ಬೆಳೆದ ಕೆಲವರಂತೂ ಎರಡು ಮೂರು ಲಕ್ಷ ರುಪಾಯಿ ನಷ್ಟ ಅನುಭವಿಸಿದ್ದಾರೆ. ಮಳೆ ಜಾಸ್ತಿಯಾದರೆ ಈರುಳ್ಳಿ ಗೆಡ್ಡೆಗಳು ಕೊಳೆತು ಹೋಗುವುದರಿಂದ ಹೀಗಾಗಿದೆ.
ಹತ್ತಿ ಬೆಳೆದ ರೈತರಿಗೂ ಲಕ್ಷಾಂತರ ರುಪಾಯಿ ನಷ್ಟ ಆಗಿದೆ. ಕಾಯಿಗಟ್ಟಿದ್ದ ಹತ್ತಿ ಗಾಳಿ-ಮಳೆಯಿಂದ ನೆಲ ಕಚ್ಚಿದೆ. ಮೆಕ್ಕೆಜೋಳ, ಮೆಣಸಿನಕಾಯಿ ಬೆಳೆಗಳೂ ಕಟಾವಿಗೆ ಬಂದಿದ್ದವು. ಕಳೆದ ಹದಿನೈದು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಅವುಗಳಲ್ಲಿ ಮೊಳಕೆ ಮೂಡಿಸಿರುವುದರಿಂದ ಈ ಬೆಳೆಗಳೂ ಹಾಳಾಗಿವೆ. ಅನಾವೃಷ್ಟಿ ಬರ ತಂದರೆ, ಅತಿವೃಷ್ಟಿ ರೈತರ ಜೀವನಕ್ಕೆ ಗರ ಬಡಿಸಿದೆ.
ಸಾವು : ರಾಯಚೂರಲ್ಲಿ ಶುಕ್ರವಾರ ಸಿಡಿಲು ಬಡಿದ ಕಾರಣ ಮಹಾದೇವಿ (25) ಎಂಬಾಕೆ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಆಡಳಿತ ಹೇಳಿದೆ.
(ಇನ್ಫೋ ವಾರ್ತೆ)