ನವೆಂಬರ್ 10ರಿಂದ ಚಿಕ್ಕಮಗಳೂರಿನಲ್ಲಿ ರಾಜ್ಯ ಗಮಕ ಸಮ್ಮೇಳನ
ಚಿಕ್ಕಮಗಳೂರು : ರಾಜ್ಯ ಗಮಕಕಲಾ ಪರಿಷತ್ ಎರಡು ದಿನಗಳ ರಾಜ್ಯಮಟ್ಟದ ಗಮಕ ಸಮ್ಮೇಳನವನ್ನು ನಗರದಲ್ಲಿ ನವೆಂಬರ್ 10ರಿಂದ ಯೋಜಿಸಿದೆ.
ಗಮಕಕಲಾ ಪರಿಷತ್ ಆಯೋಜಿಸುತ್ತಿರುವ ಆರನೇ ರಾಜ್ಯ ಸಮ್ಮೇಳನ ಇದಾಗಿದ್ದು, ಕವಿ ಸ್ಮರಣೆಯ ಕುರಿತು ಐದು ಗೋಷ್ಠಿಗಳನ್ನು ಏರ್ಪಡಿಸಲಾಗಿದೆ. ಗಮಕ ಹಾಡುಗಾರಿಕೆ ಮತ್ತು ವಿವಿಧ ಭಾಷೆಗಳಲ್ಲಿ ಗಮಕಗಳ ಪರಿಚಯ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಗಮಕ ಕಲೋಪಾಸಕರು ಪುಸ್ತಕವನ್ನೂ ಬಿಡುಗಡೆ ಮಾಡಲಾಗುವುದು ಎಂದು ಪರಿಷತ್ತಿನ ಪ್ರಕಟಣೆ ತಿಳಿಸಿದೆ.
ಸಮ್ಮೇಳನದಲ್ಲಿ ರಾಜ್ಯದ ಹಿರಿಯ ಗಮಕ ಕಲಾವಿದರು ಭಾಗವಹಿಸುವರು. ಹೊಳೆನರಸೀಪುರದ ವಿದುಷಿ ಪ್ರಿಯದರ್ಶಿನಿ ಐಯ್ಯಂಗಾರ್ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಪ್ರಿಯದರ್ಶಿನಿ ಅವರಿಗೆ ಗಮಕ ರತ್ನಾಕರ ಬಿರುದು ನೀಡಿ ಸನ್ಮಾನಿಸುವ ಕಾರ್ಯಕ್ರಮವೂ ಇದೆ.
ಗಮಕ ಕಲಾವಿದರಾದ, ಜಯಾ ರಾಜಶೇಖರ್, ಎನ್. ಕೆ. ಶ್ರೀರಂಗಮ್ಮ, ಜಯಮ್ಮ, ವಸಂತ ಲಕ್ಷ್ಮಿ ಸೀತಾರಾಮಯ್ಯ, ಕೆ.ಎನ್. ನರಸಿಂಹಮೂರ್ತಿ ರಾವ್, ರಮೇಶ್ ಚಂದ್ರ ಕುಲಕರ್ಣಿ ಮತ್ತು ಕೃಷ್ಣ ಮೂರ್ತಿ ಜೊತೆಗೆ ಚಿತ್ರದುರ್ಗದ ಗಮಕ ಕಲಾಭಿಮಾನಿಗಳ ಸಂಘವನ್ನು ಸ್ಮರಣಿಕೆ ನೀಡಿ ಸಮ್ಮೇಳನದಲ್ಲಿ ಗೌರವಿಸಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಸಚಿವೆ ರಾಣಿ ಸತೀಶ್ ಸಮ್ಮೇಳನವನ್ನು ಉದ್ಘಾಟಿಸುವರು.
(ಇನ್ಫೋ ವಾರ್ತೆ)