ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ತೇರು ಉಡುಪಿ ರಾಜಾಂಗಣಕ್ಕೆ?
ಸಾಲಿಗ್ರಾಮ : ತುಮಕೂರಿನಲ್ಲಿ ನಡೆಸಬೇಕೆಂದು ನಿರ್ಧರಿಸಲಾಗಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಈವರೆಗೂ ಗುಣಾತ್ಮಕ ಪ್ರತಿಕ್ರಿಯೆ ಬರದೇ ಇರುವುದರಿಂದ ಕಾರ್ಯಕಾರಿ ಸಮಿತಿಯ ಒಪ್ಪಿಗೆ ದೊರೆತಲ್ಲಿ ಸಮ್ಮೇಳನವನ್ನು ಉಡುಪಿಯ ರಾಜಾಂಗಣದಲ್ಲಿ ನಡೆಸಲಾಗುವುದು ಎಂದು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹರಿಕೃಷ್ಣ ಪುನರೂರು ತಿಳಿಸಿದ್ದಾರೆ.
ಗುರುವಾರ ವಾಣಿ ವಿಲಾಸಿನಿ ಸಂಸ್ಕೃತ ಶಾಲೆಯಲ್ಲಿ ಡಾ. ಶಿವರಾಮ ಕಾರಂತರ ಜನ್ಮಶತಾಬ್ಧಿ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಉಡುಪಿ ಕೃಷ್ಣ ದೇವಸ್ಥಾನದ ರಾಜಾಂಗಣದಲ್ಲಿ ಬರುವ ಡಿಸೆಂಬರ್ನಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆಸಲು ಪರ್ಯಾಯ ಪೀಠದ ಪೇಜಾವರ ಶ್ರೀಗಳು ಈಗಾಗಲೇ ಸಮ್ಮತಿಸಿದ್ದಾರೆ. ಆದರೆ ಕನ್ನಡ ಸಾಹಿತ್ಯ ಪರಿಷತ್ನ ಕಾರ್ಯಕಾರಿ ಸಮಿತಿಯಲ್ಲಿ ಈ ಬಗ್ಗೆ ನಿರ್ಣಯವಾಗಬೇಕಾಗಿದೆ ಎಂದು ಪುನರೂರು ಹೇಳಿದರು.
ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತುಮಕೂರಿನಲ್ಲಿ ನಡೆಸಲು ಪ್ರೊ. ಎನ್. ಬಸವಾರಾಧ್ಯ ಅವರು ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷರಾಗಿದ್ದಾಗ ನಿರ್ಧರಿಸಲಾಗಿತ್ತು. ಆದರೆ ಅಲ್ಲಿನ ಜನಪ್ರತಿನಿಧಿಗಳು ಈ ಬಗ್ಗೆ ಯಾವುದೇ ಆಸಕ್ತಿ ತೋರಿಸುತ್ತಿಲ್ಲ ಎಂಬ ಕಾರಣಕ್ಕೆ ಸಾಹಿತ್ಯ ಸಮ್ಮೇಳನವನ್ನು ಮುಂದೂಡಲಾಗಿತ್ತು. ಸಾಹಿತ್ಯ ಪರಿಷತ್ನ ನೂತನ ಅಧ್ಯಕ್ಷರಾಗಿ ಹರಿಕೃಷ್ಣ ಪುನರೂರು ಅವರು ಆಯ್ಕೆಯಾದ ನಂತರ ಸಮ್ಮೇಳನವನ್ನು ಮತ್ತೆ ತುಮಕೂರಿನಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು.
(ಇನ್ಫೋ ವಾರ್ತೆ)