ಚೆನ್ನಪಟ್ಟಣದಲ್ಲಿ ನೀರಾ ಗಲಾಟೆ, 3 ದಿನಗಳ ನಿಷೇಧಾಜ್ಞೆ ಜಾರಿ
ಚೆನ್ನಪಟ್ಟಣ : ನೀರಾ ಚಳುವಳಿಕಾರರನ್ನು ಮತ್ತು ಉತ್ಪಾದಕರನ್ನು ಸೋಮವಾರ ಪೊಲೀಸರು ಬಂಧಿಸಿದ ಪರಿಣಾಮವಾಗಿ ರೊಚ್ಚಿಗೆದ್ದ ರೈತರು ನಡೆಸಿದ ಗಲಾಟೆಯಲ್ಲಿ 14 ಬಸ್ಸುಗಳು ಜಖಂಗೊಂಡಿವೆ.
ಸುಮಾರು 300 ಮಂದಿ ರೈತರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದು 12 ಮಂದಿ ಪೊಲೀಸರು ಮತ್ತು 10 ಮಂದಿ ರೈತರು ಗಾಯಗೊಂಡಿದ್ದಾರೆ. ಗಲಾಟೆಯ ಪರಿಣಾಮವಾಗಿ ಚಿಕ್ಕಮಗಳೂರು ಬಳಿಯ ಒಂದು ಸರಕಾರಿ ಬಸ್ ಸುಟ್ಟು ಬೂದಿಯಾಗಿದೆ.
ಈ ಘರ್ಷಣೆಯಿಂದಾಗಿ ಮೈಸೂರು- ಬೆಂಗಳೂರು ಹೆದ್ದಾರಿಯಲ್ಲಿ ಕೆಲವು ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿತ್ತು. ಪಟ್ಟಣದಾದ್ಯಂತ ಅಕ್ಟೋಬರ್ 11ರವರೆಗೆ ನಿಷೇಧಾಜ್ಞೆ ಹೇರಲಾಗಿದೆ.
ರಸ್ತೆ ತಡೆ ನಡೆಸುತ್ತಿದ್ದ ರೈತರನ್ನು ಬಂಧಿಸಲು ಮುಂದಾದಾಗ ಇಲ್ಲಿನ ಟೌನ್ ಸಬ್ಇನ್ಸ್ಪೆಕ್ಟರ್ ಶಿವಕುಮಾರ್ ಮತ್ತು ಸರ್ಕಲ್ ಇನ್ಸ್ಪೆಕ್ಟರ್ ಗಿರಿಜೇಶ್ ಮತ್ತಿತರರ ಮೇಲೆ ಪ್ರತಿಭಟನಾಕಾರರು ಹಲ್ಲೆ ನಡೆಸಲು ಯತ್ನಿಸಿದ್ದರಿಂದ ಲಾಠಿ ಚಾರ್ಜ್ ಮಾಡಬೇಕಾಯಿತು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭಾಸ್ಕರರಾವ್ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)