ಕೇಂದ್ರದ ಮೇಲೆ ಉ.ಪ್ರ. ಚುನಾವಣೆ ಫಲಿತಾಂಶದ ಪರಿಣಾಮ: ಕೃಷ್ಣ
ಬೆಂಗಳೂರು : ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶ ಕೇಂದ್ರದ ಎನ್.ಡಿ.ಎ. ಸರಕಾರದ ಮೇಲೆ ಖಂಡಿತಾ ಪರಿಣಾಮ ಬೀರುತ್ತದೆ ಎಂದು ಕರ್ನಾಟಕ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಹೇಳಿದ್ದಾರೆ. ತಮ್ಮ ಸರಕಾರಕ್ಕೆ ಅ.11ಕ್ಕೆ ಎರಡು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಪಿ.ಟಿ.ಐ. ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಉತ್ತರ ಪ್ರದೇಶ ಸರಕಾರದ ವಿರುದ್ಧ ಅಲ್ಲಿನ ಜನತೆ ನೀಡುವ ತೀರ್ಪು ಎನ್.ಡಿ.ಎ. ಮೈತ್ರಿಕೂಟದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಕೃಷ್ಣ ಹೇಳಿದ್ದಾರೆ. ಇದರ ಪರಿಣಾಮ ರಾಷ್ಟ್ರ ರಾಜಕಾರಣದ ಮೇಲೂ ಉಂಟಾಗುತ್ತದೆ ಎಂದಿರುವ ಅವರು, ಉತ್ತರ ಪ್ರದೇಶ ಚುನಾವಣೆ ಫಲಿತಾಂಶ ಕೇಂದ್ರ ಸರಕಾರವನ್ನು ಅಸ್ಥಿರಗೊಳಿಸುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ್ದಾರೆ.
ಉತ್ತರ ಪ್ರದೇಶವು ದೇಶದಲ್ಲೇ ಅತಿ ದೊಡ್ಡ ರಾಜ್ಯವಾಗಿದೆ. ಅಲ್ಲಿ ಭಾರತೀಯ ಜನತಾಪಕ್ಷದ ಆಡಳಿತ ಇದೆ. ಅಲ್ಲಿನ ಜನತೆ ಸರಕಾರಕ್ಕೆ ವಿರುದ್ಧವಾದ ತೀರ್ಪು ನೀಡಿದರೆ, ಆ ತೀರ್ಪು ಬಿ.ಜೆ.ಪಿ. ನೇತೃತ್ವದ ಕೇಂದ್ರ ಸರಕಾರದ ಮೇಲೆ ಪ್ರತೀಕೂಲ ಪರಿಣಾಮ ಬೀರೇ ಬೀರುತ್ತದೆ ಎಂದು ಕೃಷ್ಣ ಹೇಳಿದ್ದಾರೆ.
ಐ.ಟಿ ರಾಜಧಾನಿಯಲ್ಲ: ಬೆಂಗಳೂರು ಐ.ಟಿ. ರಾಜಧಾನಿಯಲ್ಲ, ಮಾಫಿಯಾ ರಾಜಧಾನಿ ಎಂದು ಸಂಯುಕ್ತ ಜನತಾದಳ ಅಧ್ಯಕ್ಷ ಸಿ. ಬೈರೇಗೌಡ ಹೇಳಿದ್ದಾರೆ. ಕೃಷ್ಣ ನೇತೃತ್ವದ ಕಾಂಗ್ರೆಸ್ ಸರಕಾರ ಎರಡು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಪತ್ರಿಕೆಯಾಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅವರು ರಾಜ್ಯ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜ್ಯದಲ್ಲಿ ಆಡಳಿತ ಕುಸಿದಿದೆ. ಅಧಿಕಾರಿಗಳು ತಮ್ಮ ಜೇಬು ತುಂಬಿಸಿಕೊಳ್ಳುವುದರಲ್ಲಿ ತೊಡಗಿದ್ದಾರೆ. ಇವರ ಮೇಲೆ ಸರಕಾರದ ಯಾವ ಲಗಾಮೂ ಇಲ್ಲ. ರಾಜ್ಯದಲ್ಲಿ ಆಡಳಿತವೇ ಇಲ್ಲದೆ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಕೃಷ್ಣ ಅವರನ್ನು ಬಿಟ್ಟರೆ ಪರ್ಯಾಯ ನಾಯಕರಿಲ್ಲ. ಹೀಗಾಗಿ ಆ ಪಕ್ಷಕ್ಕೆ ಕೃಷ್ಣ ಅನಿವಾರ್ಯವಾಗಿದ್ದಾರೆ. ಹೀಗಾಗೇ ಕಾಂಗ್ರೆಸ್ ಹೈಕಮಾಂಡ್ ಕೂಡ ತೆಪ್ಪಗಾಗಿದೆ. ರಾಜ್ಯದಲ್ಲಿ ರೈತರು ತೊಂದರೆಗೆ ಸಿಲುಕಿದ್ದಾರೆ. ದಿನಬೆಳಗಾದರೆ ರೈತರ ಆತ್ಮಹತ್ಯೆ ಸುದ್ದಿ ಪ್ರಕಟವಾಗುತ್ತಿದೆ. ಇದು ಆಡಳಿತ ವೈಖರಿಯೇ ಎಂದು ಅವರು ಪ್ರಶ್ನಿಸಿದ್ದಾರೆ. ರಾಜ್ಯದಲ್ಲಿ ಕೊಲೆ, ಸುಲಿಗೆ ಹೆಚ್ಚಿದ್ದು, ಅರಾಜಕತೆ ಉಂಟಾಗಿದೆ ಎಂದು ಆರೋಪಿಸಿದ್ದಾರೆ.
(ಪಿ.ಟಿ.ಐ /ಇನ್ಫೋ ವಾರ್ತೆ)