ನೀರಾ ಮಾರಾಟಗಾರರ ಬಂಧನ:ಚನ್ನಪಟ್ಟಣದಲ್ಲಿ ಬಸ್ಗೆ ಬೆಂಕಿ
ಚನ್ನಪಟ್ಟಣ: ನೀರಾ ಮಾರಾಟ ಮಾಡುತ್ತಿದ್ದ ರೈತರನ್ನು ಪೊಲೀಸರು ಬಂಧಿಸಿರುವುದನ್ನು ವಿರೋಧಿಸಿ ನಡೆದ ರಸ್ತೆ ತಡೆ ಚಳವಳಿ ಹಿಂಸಾ ಮಾರ್ಗ ಹಿಡಿದ ಪರಿಣಾಮವಾಗಿ ಏಳೆಂಟು ವಾಹನಗಳು ಜಖಂಗೊಂಡು, ಒಂದು ಸರಕಾರಿ ಬಸ್ ಬೆಂಕಿಗಾಹುತಿಯಾದ ಘಟನೆ ಸೋಮವಾರ ಮಧ್ಯಾಹ್ನ ಚನ್ನಪಟ್ಟಣದಲ್ಲಿ ನಡೆದಿದೆ.
ಶಾಂತಿಯುತವಾಗೇ ನಡೆಯುತ್ತಿದ್ದ ಚಳವಳಿಯ ಮಧ್ಯೆ ದುಷ್ಕರ್ಮಿಯಾಬ್ಬರು ಟಾಟಾಸುಮೋ ಒಂದಕ್ಕೆ ಕಲ್ಲು ತೂರಿದಾಗ, ಇತರರೂ ಅದೇ ಮಾರ್ಗ ಹಿಡಿದರು. ಇದನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದ್ದು, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವಂತೆ ಮಾಡಿತು.
ಲಾಠಿ ಏಟಿಗೆ ಹೆದರಿ ಚದುರಿದ ಪ್ರತಿಭಟನಾಕಾರರು ಬೆಂಗಳೂರು - ಮೈಸೂರು ರಸ್ತೆಯಲ್ಲಿ ಬಸ್ಗಳಿಗೆ ಕಲ್ಲು ತೂರಿ, ಸುಮಾರು ಏಳೆಂಟು ಸರಕಾರಿ ಬಸ್ಗಳನ್ನು ಜಖಂಗೊಳಿಸಿದರು. ಚಿಕ್ಕಮಳೂರು ಕ್ರಾಸ್ ಬಳಿ ದುಷ್ಕರ್ಮಿಗಳು ಕೆಎಸ್ಆರ್ಟಿಸಿ ಬಸ್ ಒಂದಕ್ಕೆ ಬೆಂಕಿಯನ್ನೂ ಹಚ್ಚಿದರು.
ಪಟ್ಟಣದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋದ ಕೂಡಲೇ ಭಯಭೀತರಾದ ವರ್ತಕರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದರು. ಈ ಹೊತ್ತು ಪಟ್ಟಣದಲ್ಲಿ ಬಿಗುವಿನ ಪರಿಸ್ಥಿತಿ ಇದ್ದು, ಪೊಲೀಸರು ಮುಂಜಾಗರೂಕತೆ ಕ್ರಮವಾಗಿ 144ನೇ ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ.
ಪರಿಸ್ಥಿತಿಯ ನಿಯಂತ್ರಣಕ್ಕಾಗಿ ಪೊಲೀಸರು ಕ್ರಮ ಕೈಗೊಂಡಿದ್ದು, ಹೆಚ್ಚುವರಿ ಪಡೆಯನ್ನೂ ಕರೆಸಿಕೊಳ್ಳಲಾಗಿದೆ. ಕಲ್ಲು ತೂರಾಟದಲ್ಲಿ ಕೆಲವು ಪೊಲೀಸರು ಹಾಗೂ ನಾಗರಿಕರು ಗಾಯಗೊಂಡಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಕ್ರಮ ನೀರಾ ಮಾರಾಟಕ್ಕೆ ಬೆಂಬಲ ನೀಡುತ್ತಿದ್ದ ಮೂವರು ಹಾಗೂ ತೆಂಗಿನ ಮರಗಳಿಗೆ ನೀರಾ ಕಟ್ಟುತ್ತಿದ್ದ 21 ಜನರನ್ನು ಸೋಮವಾರ ಬಂಧಿಸಲಾಗಿದೆ. ನೀರಾ ಮಾರಾಟ ಮಾಡುತ್ತಿದ್ದ 20 ಮಂದಿಯನ್ನು ಭಾನುವಾರ ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.
(ಇನ್ಫೋ ವಾರ್ತೆ)
ವಾರ್ತಾಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...