ಜಲ ವಿವಾದ ನ್ಯಾಯಾಧಿಕರಣಗಳಿಗೆ ಕಾಲಮಿತಿಇರಬೇಕು : ಕೃಷ್ಣ
ಬೆಂಗಳೂರು: ನೀರು ಹಂಚಿಕೆ ತಗಾದೆಯನ್ನು ಇತ್ಯರ್ಥಪಡಿಸಲು, ನ್ಯಾಯಾಧಿಕರಣಗಳಿಗೆ ನಿರ್ದಿಷ್ಠ ಕಾಲಮಿತಿ ಗೊತ್ತುಪಡಿಸಬೇಕು ಎಂದು ಕರ್ನಾಟಕ ರಾಜ್ಯ ಕೇಂದ್ರ ಸರಕಾರವನ್ನು ಒತ್ತಾಯಿಸಿದೆ.
ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಮಧ್ಯಂತರ ತೀರ್ಪು ನೀಡಿರುವ ನ್ಯಾಯಾಧಿಕರಣ ಇನ್ನೂ ಅಂತಿಮ ತೀರ್ಪು ನೀಡದಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ, ರಾಜ್ಯದ ಮುಖ್ಯಮಂತ್ರಿ ಕೃಷ್ಣ ಈ ಒತ್ತಾಯ ಮಾಡಿದ್ದಾರೆ.
ಕಾವೇರಿ ನ್ಯಾಯಾಧಿಕರಣದ ಅಂತಿಮ ತೀರ್ಪು ನೀಡಿಕೆಯಲ್ಲಿ ಅನಗತ್ಯ ವಿಳಂಬ ಆಗುತ್ತಿದೆ. ಈ ವಿಷಯವನ್ನು ತಾವು ಪ್ರಧಾನಿ ವಾಜಪೇಯಿ ಹಾಗೂ ಸರ್ವೋನ್ನತ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಡಾ. ಎ.ಎಸ್. ಆನಂದ್ ಅವರಲ್ಲಿ ಅರಿಕೆ ಮಾಡಿಕೊಂಡಿರುವುದಾಗಿಯೂ ಕೃಷ್ಣ ಹೇಳಿದ್ದಾರೆ.
ಕೇಂದ್ರ ಸರಕಾರವು ಎಲ್ಲ ನ್ಯಾಯಾಧಿಕರಣಗಳಿಗೂ ಕಾಲಮಿತಿ ನಿಗದಿಮಾಡಬೇಕು. ಈ ನ್ಯಾಯಮಂಡಳಿಗಳು ಸಾಧ್ಯವಾದಷ್ಟೂ ಅಲ್ಪಾವಧಿಯಲ್ಲಿ ತಮ್ಮ ಕರ್ತವ್ಯವನ್ನು ಪೂರ್ಣಗೊಳಿಸಬೇಕು ಎಂದು ಅವರು ಹೇಳಿದ್ದಾರೆ. ಆದಾಗ್ಯೂ ಮುಂದಿನ ವರ್ಷದ ಆರಂಭದಲ್ಲೇ ನ್ಯಾಯಮಂಡಳಿ ತನ್ನ ಅಂತಿಮ ತೀರ್ಪು ನೀಡುತ್ತದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
1990ರಲ್ಲಿ ಅಸ್ಥಿತ್ವಕ್ಕೆ ಬಂದ ನ್ಯಾಯಾಧಿಕರಣವು 1991ರಲ್ಲಿ ಮಧ್ಯಂತರ ತೀರ್ಪು ನೀಡಿತ್ತು. ಆದರೆ ಈವರೆಗೆ ನ್ಯಾಯಾಧಿಕರಣ ಅಂತಿಮ ತೀರ್ಪು ನೀಡಿಲ್ಲ .
ಪಾರದರ್ಶಕತೆ ಅಗತ್ಯ: ಕೇಂದ್ರದ ಎನ್.ಡಿ.ಎ. ಸರಕಾರ ಕೈಗೊಂಡಿರುವ ಬಂಡವಾಳ ಹಿಂತೆಗೆತ ನೀತಿಗೆ ಸಹಮತ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಆದರೆ ಇದರಲ್ಲಿ ಪಾರದರ್ಶಕತೆ ಇರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಕೇಂದ್ರ ಹಾಗೂ ರಾಜ್ಯಸರಕಾರಗಳ ನಡುವೆ ಬಂಡವಾಳ ಹಿಂತೆಗೆತಕ್ಕೆ ಸಂಬಂಧಿಸಿದಂತೆ ಸಮಾನ ದೃಷ್ಟಿಕೋನಗಳಿವೆ ಎಂದು ಸುದ್ದಿ ಸಂಸ್ಥೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಕೃಷ್ಣ ತಿಳಿಸಿದ್ದಾರೆ. ಬಂಡವಾಳ ಹಿಂತೆಗೆತದಲ್ಲೂ ಟೆಂಡರ್ ಪ್ರಕ್ರಿಯೆ ಇರಬೇಕು ಎಂದು ಅವರು ಹೇಳಿದ್ದಾರೆ.
ಸಾರ್ವಜನಿಕ ವಲಯದ ಯಾವ ಉದ್ದಿಮೆಯ ಪುನಶ್ಚೇತನಕ್ಕೆ ಅವಕಾಶ ಇದೆಯೋ ಅಲ್ಲಿ ಪುನಶ್ಚೇತನ ಪ್ರಯತ್ನ ನಡೆಯಬೇಕು. ಪುನಶ್ಚೇತನದ ಹಂತ ಮೀರಿರುವ ಕಂಪನಿಗಳನ್ನು ಖಾಸಗೀಕರಣ ಮಾಡಬೇಕು ಎಂದೂ ಕೃಷ್ಣ ಹೇಳಿದ್ದಾರೆ.
(ಪಿ.ಟಿ.ಐ)
ವಾರ್ತಾಸಂಚಯ
ಮುಖಪುಟ
/
ಕೃಷ್ಣಗಾರುಡಿಯ
ಕನ್ನಡಿ