ಐಟಿ ತೆರಿಗೆ : ಸಮರದ ಸರದಿ ಈಗ ಹಾರ್ಡ್ವೇರ್ ತಯಾರಕರದು
ಬೆಂಗಳೂರು : ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಫ್ಟ್ವೇರ್ ಮಂದಿಗೆ ನೀಡುವಷ್ಟು ಮಹತ್ವ ಹಾರ್ಡ್ ವೇರ್ ನೌಕರರಿಗೆ ನೀಡುತ್ತಿಲ್ಲ ಎಂಬ ಅಸಮಾಧಾನವಿದ್ದರೂ, ಐಟಿ ವಸ್ತುಗಳ ಮೇಲಿನ ಐಷಾರಾಮ ತೆರಿಗೆ ವಿರುದ್ಧದ ಸಮರಕ್ಕೆ ಸಾಫ್ಟ್ವೇರ್ ಮತ್ತು ಹಾರ್ಡ್ವೇರ್ಗಳು ಕೈ ಜೋಡಿಸಿವೆ. ಕಂಪ್ಯೂಟರ್ ಸರಕುಗಳ ಮೇಲಿನ ಶೇ 12ರ ತೆರಿಗೆಯನ್ನು ರದ್ದು ಗೊಳಿಸುವಂತೆ ಆಗ್ರಹಿಸಿ ಮುಂದಿನ ವಾರದಿಂದ ಐಟಿ ಹಾರ್ಡ್ವೇರ್ ತಯಾರಕ ರು ತಮ್ಮ ಎಲ್ಲ ಉದ್ಯಮ ವ್ಯವಹಾರಗಳನ್ನು ನಿಲ್ಲಿಸಲು ನಿರ್ಧರಿಸಿದ್ದಾರೆ.
ಮಾಹಿತಿ ತಂತ್ರಜ್ಞಾನ ಸಂಘಟನೆಯ ಸಹಕಾರ್ಯದರ್ಶಿ ಲಲಿತ್ ಪ್ರಕಾಶ್ ಈ ವಿಷಯವನ್ನು ತಿಳಿಸಿದ್ದಾರೆ. ಈ ತೆರಿಗೆಯಿಂದಾಗಿ ಹಾರ್ಡ್ವೇರ್ ಉದ್ಯಮಕ್ಕೆ ಭಾರೀ ಹಿನ್ನೆಡೆ ಉಂಟಾಗುವ ಸಂಭವವಿದ್ದು ,ಈ ತೆರಿಗೆ ವಿಧಿಸುವ ತನ್ನ ನಿರ್ಧಾರವನ್ನು ಸರಕಾರ ಹಿಂದಕ್ಕೆ ತೆಗೆದುಕೊಳ್ಳಬೇಕು ಎಂದು ಹೇಳಿದರು. ಸಂಘಟನೆಯು ತಮ್ಮ ಆಗ್ರಹವನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದು, ಮಾಹಿತಿ ತಂತ್ರಜ್ಞಾನ ಸಚಿವ ಬಿ.ಕೆ. ಚಂದ್ರಶೇಖರ್ ಜೊತೆ ಶನಿವಾರ ಮಾತುಕತೆ ನಡೆಸಲಾಯಿತು.
ಈ ಬಗ್ಗೆ ಐಟಿ ತಯಾರಕರ ಸಂಘಟನೆಯ (ಎಂಎಐಟಿ) ನಿರ್ದೇಶಕ ವೆನ್ನಿ ಮೆಹ್ತಾ ಈ ಬಗ್ಗೆ ಕೇಂದ್ರ ಐಟಿ ಸಚಿವರನ್ನು ಭೇಟಿಯಾಗಿ ತೆರಿಗೆ ರದ್ಧತಿಯ ಬಗ್ಗೆ ತಮ್ಮ ನಿಲುವನ್ನು ವ್ಯಕ್ತ ಪಡಿಸಿದ್ದಾರೆ. ಐಟಿ ಉತ್ಪನ್ನಗಳನ್ನು ಐಷಾರಾಮ ವಸ್ತುಗಳಡಿಯಲ್ಲಿ ಸೇರಿಸುವುದು ಸರಿಯಲ್ಲ ಎಂದ ಮೆಹ್ತಾ, ಐಟಿ ಮಾಲುಗಳು ಇವತ್ತಿನ ದಿನಗಳಲ್ಲಿ ಅಗತ್ಯ ವಸ್ತುಗಳಾಗಿವೆ ಎಂದು ಅಭಿಪ್ರಾಯಪಟ್ಟರು. ಅಲ್ಲದೆ ಈಗಾಗಲೇ ಐಟಿ ಕ್ಷೇತ್ರದಲ್ಲಿ ಮಾರಾಟ ತೆರಿಗೆ ಜಾರಿಯಲ್ಲಿದ್ದು ಮತ್ತೊಮ್ಮೆ ಹಾರ್ಡ್ವೇರ್ಗಳಿಗೆ ಐಷಾರಾಮ ತೆರಿಗೆ ಹೇರುವುದು ಎಷ್ಟರ ಮಟ್ಟಿಗೆ ಸರಿ ಎಂದು ಮೆಹ್ತಾ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
(ಇನ್ಫೋ ವಾರ್ತೆ)