ಭಯೋತ್ಪಾದನೆ ವಿರುದ್ಧ ಹೋರಾಟ ಭಾರತ ನಿಲುವಿಗೆ ಬ್ಲೇರ್ ಬೆಂಬಲ
ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿರುವ ಗಡಿಯಾಚೆಯ ಭಯೋತ್ಪಾದನೆ ಹಾಗೂ ಶ್ರೀನಗರದಲ್ಲಿ ಅಕ್ಟೋಬರ್ 1ರಂದು ನಡೆದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಭಾರತಕ್ಕೆ ನ್ಯಾಯ ಸಿಗಲೇ ಬೇಕು ಎಂದು ಬ್ರಿಟನ್ಪ್ರಧಾನಿ ಟೋನಿ ಬ್ಲೇರ್ ಹೇಳಿದ್ದಾರೆ.
ಭಯೋತ್ಪಾದನೆ ವಿರುದ್ಧ ಜಾಗತಿಕ ಮೈತ್ರಿಕೂಟ ರಚನೆ ಸಂಬಂಧ ಭಾರತಕ್ಕೆ ಆಗಮಿಸಿರುವ ಅವರು, ಪ್ರಧಾನಿ ಅಟಲ್ಬಿಹಾರಿ ವಾಜಪೇಯಿ ಅವರೊಂದಿಗೆ 35 ನಿಮಿಷಗಳ ಕಾಲ ಸಮಾಲೋಚಿಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಭಯೋತ್ಪಾದನೆಯನ್ನು ಹತ್ತಿಕ್ಕಲು ಅಂತಾರಾಷ್ಟ್ರೀಯ ಸಮುದಾಯ ಒಂದಾಗಬೇಕು ಎಂದೂ ಅವರು ಪ್ರತಿಪಾದಿಸಿದರು. ವಿಶ್ವವೇ ಸಂಘಟಿತವಾಗಿ ಭಯೋತ್ಪಾದನೆ ವಿರುದ್ಧ ಹೋರಾಟ ನಡೆಸಬೇಕು ಎಂಬ ಭಾರತದ ನಿಲುವನ್ನು ಅವರು ಸಂಪೂರ್ಣವಾಗಿ ಬೆಂಬಲಿಸಿದರು.
ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಯ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಮಡಿದವರಿಗೆ ಬ್ಲೇರ್ ಸಂತಾಪ ಸೂಚಿಸಿದರು. ಇಂತಹ ದುಷ್ಕೃತ್ಯಗಳಿಗೆ ಯಾವುದೇ ನಾಗರಿಕ ಸಮಾಜದಲ್ಲಿ ಸ್ಥಾನ ಇಲ್ಲ ಎಂದು ಬ್ಲೇರ್ ಕಟುವಾಗಿ ನುಡಿದರು.
ಇದಕ್ಕೂ ಮುನ್ನ ಈ ಇಬ್ಬರು ನಾಯಕರು ಭಯೋತ್ಪಾದನೆ ಹತ್ತಿಕ್ಕಲು ಜಾಗತಿಕ ಮೈತ್ರಿಕೂಟ ರಚಿಸುವ ಸಂಬಂಧ ಮಾತುಕತೆ ನಡೆಸಿದರು. ಭಾರತದ ನೆಲದಲ್ಲಿ ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿರುವ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸಬೇಕು ಎಂಬ ಭಾರತದ ಒತ್ತಾಯವನ್ನು ಬ್ಲೇರ್ ತಿರಸ್ಕರಿಸಿದರು.
ಈ ವಿಷಯವನ್ನು ಚರ್ಚಿಸಲು ಇದು ಸಕಾಲವಲ್ಲ ಎಂದು ಅವರು ವಾಜಪೇಯಿ ಅವರಿಗೆ ಸ್ಪಷ್ಟಪಡಿಸಿದರು. ಸೆಪ್ಟೆಂಬರ್ 11ರಂದು ಅಮೆರಿಕದ ಮೇಲೆ ನಡೆದ ಉಗ್ರರ ದಾಯುದಾಳಿ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯವಾಗಿ ಬೆಳೆಯುತ್ತಿರುವ ಭಯೋತ್ಪಾದನೆಯನ್ನು ಎಲ್ಲ ರಾಷ್ಟ್ರಗಳೂ ಒಂದಾಗಿ ಹತ್ತಿಕ್ಕುವ ಅವಶ್ಯಕತೆ ಇದೆ ಎಂಬ ಭಾರತದ ನಿಲುವನ್ನು ಅವರು ಅನುಮೋದಿಸಿದರು.
ಜಾಗತಿಕ ಭಯೋತ್ಪಾದನೆಯ ವಿರುದ್ಧ ಪ್ರತ್ಯೇಕ ಹೋರಾಟ ನಡೆಸುವುದನ್ನು ತಾವು ಬೆಂಬಲಿಸುವುದಿಲ್ಲ ಎಂದು ಪ್ರಧಾನಿ ವಾಜಪೇಯಿ ಅವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
(ಪಿ.ಟಿ.ಐ)