ನವೆಂಬರ್ ಕೊನೆಗೆ ಕುಶಾಲ ನಗರದ ಪೊನ್ನಂಪೇಟೆಯಲ್ಲಿ ಕೃಷಿ ಮೇಳ
ಕುಶಾಲನಗರ : ಇಲ್ಲಿನ ಪೊನ್ನಂಪೇಟೆಯಲ್ಲಿ ಜಿಲ್ಲಾ ಪಂಚಾಯತ್ ಕೃಷಿ ಹಾಗೂ ಕೈಗಾರಿಕಾ ನಿರ್ವಹಣಾ ಸಮಿತಿಯು ನವೆಂಬರ್ ಕೊನೇ ವಾರದಲ್ಲಿ ಕೃಷಿ ಮೇಳವನ್ನು ಆಯೋಜಿಸಿದೆ.
ಈ ವಿಷಯವನ್ನು ಸಮಿತಿಯ ಅಧ್ಯಕ್ಷ ಬಿ.ಜಿ. ರಘುನಾಥ್ ನಾಯಕ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕೃಷಿ ಅಧ್ಯಯನ ಕೇಂದ್ರದಲ್ಲಿ ಸಮ್ಮೇಳನವು ನಡೆಯಲಿದ್ದು, ಕೃಷಿ ಬೆಳೆಗಳು, ಬಿತ್ತನೆ ಬೀಜ, ಕೊಡಗಿನ ವಾಣಿಜ್ಯ ಬೆಳೆಗಳ ಬಗ್ಗೆ ಸಮ್ಮೇಳನದಲ್ಲಿ ಚರ್ಚೆ ನಡೆಸಲಾಗುವುದು. ಕೃಷಿಕರಿಗೆ ಆಧುನಿಕ ತಂತ್ರಜ್ಞಾನ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ವ್ಯವಸಾಯವನ್ನು ಇನ್ನಷ್ಟು ಲಾಭದಾಯಕವಾಗಿ ನಡೆಸಲು ಸರಿಯಾದ ಮಾಹಿತಿಯ ಕೊರತೆ ಇದೆ. ಈ ಬಗ್ಗೆಯೂ ಸಮ್ಮೇಳನದಲ್ಲಿ ಮಾತುಕತೆ ನಡೆಸಲಾಗುವುದು.
ಕಡಿಮೆ ಸಮಯದಲ್ಲಿ ಹೆಚ್ಚು ಲಾಭ ತರುವ ರೇಶ್ಮೆ ವ್ಯವಸಾಯದ ಬಗ್ಗೆಯೂ ರೈತರಿಗೆ ತಿಳಿಸಿಕೊಡಬೇಕಾಗಿದೆ. ಅಲ್ಲದೆ ಕೃಷಿ ಸಚಿವಾಲಯದ ಸುಧಾರಣೆಗೆ ಸಂಬಂಧಿಸಿ ಎಲ್ಲ ಮಾಹಿತಿಗಳೂ ರೈತರನ್ನು ತಲುಪಬೇಕು. ಸಾಮಾನ್ಯವಾಗಿ ಮಣ್ಣು ರಕ್ಷಣೆಯ ಬಗ್ಗೆ ನಿರ್ಲಕ್ಷ್ಯ ತಾಳುವ ರೈತರಿಗೆ ಆ ಬಗ್ಗೆ ತಿಳಿಸಿಕೊಡುವ ಕಾರ್ಯ ಆಗಬೇಕಾಗಿದೆ ಎಂದು ನಾಯಕ್ ಹೇಳಿದರು. ಸಮ್ಮೇಳನವನ್ನು ರಾಜ್ಯ ಕೃಷಿ ಸಚಿವರು ಉದ್ಘಾಟಿಸಲಿದ್ದಾರೆ.
(ಇನ್ಫೋ ವಾರ್ತೆ)