Get Updates
Get notified of breaking news, exclusive insights, and must-see stories!

ಬೆಂಗಳೂರಿಗೆ ಬಂದಿದೆ ಮಾರಣಾಂತಿಕ ಡೆಂಗ್ಯೂ ಜ್ವರ.. ಎಚ್ಚರ!

(ವಿಶೇಷ ವರದಿ)

ಬೆಂಗಳೂರು : ಉತ್ತರ ಕನ್ನಡ, ಉಡುಪಿಯ ಸುತ್ತಮುತ್ತ ಕಾಣಿಸಿಕೊಂಡ ಇಲಿ ಜ್ವರ, ಬಳ್ಳಾರಿ ಜಿಲ್ಲೆಯಲ್ಲಿ ಕಾಣಿಸಿಕೊಂಡಿರುವ ಮೆದುಳು ಜ್ವರ ಹತ್ತಾರು ಜೀವಗಳನ್ನು ಬಲಿ ತೆಗೆದುಕೊಂಡಿದೆ. ಈಗ ಡೆಂಗ್ಯೂ ಜ್ವರ ಕೂಡ ರಾಜ್ಯದ ಜನತೆಯನ್ನು ಕಾಡುತ್ತಿದೆ. ಬೆಂಗಳೂರು ನಗರಪಾಲಿಕೆ ವ್ಯಾಪ್ತಿಯಲ್ಲೇ 17 ಡೆಂಗ್ಯೂ ಜ್ವರದ ಪ್ರಕರಣಗಳು ದಾಖಲಾಗಿವೆ. ಆದರೆ, ಈವರೆಗೆ ಡೆಂಗ್ಯೂ ಜ್ವರದಿಂದ ಪ್ರಾಣಹಾನಿ ಆದ ವರದಿಗಳು ಬಂದಿಲ್ಲ.

ಬೆಂಗಳೂರಿನ ಕಾಮಾಕ್ಷಿಪಾಳ್ಯ, ಯಶವಂತಪುರ, ಮಲ್ಲೇಶ್ವರ, ಕಮಲಾನಗರದಲ್ಲಿ ಈ ರೋಗ ಹೆಚ್ಚಾಗಿ ಕಾಣಿಸಿಕೊಂಡಿದೆ. ನಗರದ ದಕ್ಷಿಣ ವಲಯದಲ್ಲಿ 6, ಪಶ್ಚಿಮ ವಲಯದಲ್ಲಿ 7 ಹಾಗೂ ಪೂರ್ವ ವಲಯದಲ್ಲಿ 2 ಡೆಂಗ್ಯೂ ಜ್ವರದ ಪ್ರಕರಣಗಳು ಅಧಿಕೃತವಾಗಿ ಪತ್ತೆಯಾಗಿವೆ.

ಕನ್ನಡ.ಇಂಡಿಯಾಇನ್‌ಫೋ.ಕಾಂಗೆ ಈ ವಿಷಯವನ್ನು ತಿಳಿಸಿರುವ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆರೋಗ್ಯಾಧಿಕಾರಿಗಳಾದ ಡಾ. ಆರ್‌.ಕೆ. ಕುಮಾರಸ್ವಾಮಿ ಅವರು, ಡೆಂಗ್ಯೂ ಜ್ವರದ ಬಗ್ಗೆ ವಿವರಗಳನ್ನೂ ನೀಡಿದ್ದಾರೆ. ಮಲೇರಿಯಾದಂತೆ ಈ ಜ್ವರ ಕೂಡ ಸೊಳ್ಳೆಯಿಂದಲೇ ಹಬ್ಬುವ ವ್ಯಾಧಿ. ಸಾಮಾನ್ಯವಾಗಿ ಹೊಸ ನೀರಿನಲ್ಲೇ ಉತ್ಪತ್ತಿಯಾಗುವ ಈಡಿಸ್‌ ಈಜಿಪ್ಟಿ (Aedes aegypti) ಎಂಬ ಸೊಳ್ಳೆಯಿಂದ ಈ ರೋಗ ಹರಡುತ್ತದೆ. ಮನೆಯ ಮೇಲೆ ಎಸೆದ ತೆಂಗಿನ ಚಿಪ್ಪು, ಪ್ಲಾಸ್ಟಿಕ್‌ ಲೋಟ, ಮನೆಯ ಸುತ್ತ ಮುತ್ತ ಮಳೆಗಾಲದಲ್ಲಿ ನಿಲ್ಲುವ ಹೊಸ ನೀರಿನಲ್ಲಿ ಈ ಸೊಳ್ಳೆ ಮೊಟ್ಟೆ ಇಟ್ಟು, ಸಂತಾನೋತ್ಪತ್ತಿ ಮಾಡುತ್ತದೆ.

ರೋಗಲಕ್ಷಣಗಳು : ಡೆಂಗ್ಯೂ ಜ್ವರ ಪೀಡಿತರಿಗೆ ತೀವ್ರ ಜ್ವರ - ತಲೆನೋವು ಕಾಡುತ್ತದೆ. ಕೀಲು ನೋವು ಆರಂಭವಾಗುತ್ತದೆ. ಕಣ್ಣಿನ ಹಿಂಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ವಾಂತಿ, ತೀವ್ರ ನಿಶ್ಶಕ್ತಿ ಉಂಟಾಗುತ್ತದೆ. ಡೆಂಗ್ಯೂ ಜ್ವರದ ಸೋಂಕು ತಗುಲಿರುವ ವ್ಯಕ್ತಿಯನ್ನು ಕಚ್ಚಿದ ಸೊಳ್ಳೆ ಇತರರನ್ನು ಕಚ್ಚಿದರೆ, ಅವರಿಗೂ ರೋಗ ಹಬ್ಬುವ ಸಾಧ್ಯತೆ ಇದೆ. ಆರಂಭದಲ್ಲಿ ಮಾತ್ರ ಈ ರೋಗವನ್ನು ಔಷಧಗಳಿಂದ ಗುಣಪಡಿಸಬಹುದು. ರೋಗ ಉಲ್ಭಣವಾಗಿ ರಕ್ತಸ್ರಾವ ಉಂಟಾದರೆ, ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ, ಮುನ್ನೆಚ್ಚರಿಕೆಯಿಂದ ಈ ರೋಗ ಬಾರದಂತೆ ತಡೆಯುವುದೇ ಉತ್ತಮ ಎನ್ನುತ್ತಾರೆ ಡಾ. ಕುಮಾರಸ್ವಾಮಿ ಅವರು.

ಮುನ್ನೆಚ್ಚರಿಕೆ : ಮುಖ್ಯವಾಗಿ ಮನೆಯ ಬಳಿ, ಸುತ್ತಮುತ್ತ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು. ತೆಂಗಿನ ಚಿಪ್ಪು (ಕರಟ), ಪ್ಲಾಸ್ಟಿಕ್‌ ಲೋಟ, ಡಬ್ಬಗಳಲ್ಲಿ ನೀರು ಸಂಗ್ರಹವಾಗದಂತೆ ಎಚ್ಚರ ವಹಿಸಬೇಕು. ಅಧ್ಯಯನಗಳ ಪ್ರಕಾರ ಈ ಸೊಳ್ಳೆಗಳು ದೊಡ್ಡಗಾತ್ರದ ಜಲಾಶ್ರಯಗಳಿಗಿಂತ, ಚಿಕ್ಕಚಿಕ್ಕ ನೀರಿನ ತಾಣಗಳಲ್ಲಿಯೇ ಹೆಚ್ಚು ಉತ್ಪತ್ತಿಯಾಗುತ್ತವೆ. ಹೀಗಾಗಿ ಮನೆಯಲ್ಲಿ ಸಂಗ್ರಹಿಸಿದ ನೀರನ್ನು ಕೂಡ ಎರಡು ದಿನದ ಬಳಿಕ ಬೇರೆ ಪಾತ್ರೆಗೆ ವರ್ಗಾಯಿಸಿ, ಹಳೆಯ ಪಾತ್ರೆ ತೊಳೆದು ಬೋರಲು ಹಾಕುವುದು ಉತ್ತಮ.

ಪಾತ್ರೆಯ ತಳದಲ್ಲಿ ಸ್ವಲ್ಪ ನೀರು ಇದ್ದರೂ ಸೊಳ್ಳೆ ಅಲ್ಲಿ ಸಂತಾನೋತ್ಪತ್ತಿ ಮಾಡುತ್ತದೆ. ಮಕ್ಕಳಿಗೆ ಬೇಗ ತಗುಲುವ ಈ ವ್ಯಾಧಿ ಪ್ರಾಣವನ್ನೂ ತೆಗೆಯುತ್ತದೆ. ಈ ಬಗ್ಗೆ ನೀವು ಜಾಗೃತರಾಗಿದ್ದಷ್ಟೂ ಒಳ್ಳೆಯದು. ಜ್ವರ ಬಂದರೆ, ಸಾಮಾನ್ಯ ಜ್ವರ ಎಂದು ಯಾವುದೇ ಕಾರಣಕ್ಕೂ ಉಪೇಕ್ಷಿಸಬೇಡಿ. ತತ್‌ಕ್ಷಣವೇ ವೈದ್ಯರಿಗೆ ತೋರಿಸಿ ಎನ್ನುತ್ತಾರೆ ಆರೋಗ್ಯಾಧಿಕಾರಿಗಳು.

ಸೊಳ್ಳೆಗಳು ಮನೆಯಾಳಗೆ ಸೇರದಂತೆ ಎಚ್ಚರಿಕೆ ವಹಿಸುವುದು ಉತ್ತಮ. ರಾತ್ರಿ ಮಲಗುವಾಗ ಸೊಳ್ಳೆಯ ಪರದೆ ಬಳಸಿ, ಸಾಧ್ಯವಾದಷ್ಟು ಸೊಳ್ಳೆಗಳಿಂದ ಕಚ್ಚಿಸಿಕೊಳ್ಳದಂತೆ ಮುಂಜಾಗರೂಕತೆವಹಿಸಿ ಎನ್ನುತ್ತಾರೆ. ಡೆಂಗ್ಯೂಜ್ವರದ ಬಗ್ಗೆ ಬೆಂಗಳೂರು ಮಹಾನಗರ ಪಾಲಿಕೆ ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ 8 ಅಂಶದ ತಿಳಿವಳಿಕೆ ನೀಡುತ್ತಿದೆ ಎಂದೂ ಅವರು ಹೇಳಿದ್ದಾರೆ.

ಸೊಳ್ಳೆಗಳನ್ನು ಓಡಿಸಲು ಪಾಲಿಕೆ ಹೊಗೆ ಹಾಗೂ ಆಂಟಿ ಲಾರ್‌ವೆಲ್‌ ಸಿಂಪಡಿಸುತ್ತಿದೆ. ಮೂರೂ ವಲಯಗಳಲ್ಲೂ ಮಿಷನ್‌ಮೌಂಟೆಡ್‌ ವಾಹನಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿ ಶನಿವಾರ ನಿಂತಿ ನೀರಿರುವ ಬಾವಿಗಳಲ್ಲಿ ಸೊಳ್ಳೆಗಳನ್ನೇ ತಿಂದು ಬದುಕುವ ಕಪ್ಪಿ ಹಾಗೂ ಗಂಬೂಜಿಯಾ ಎಂಬ ಮೀನುಗಳನ್ನು ಬಿಡಲಾಗುತ್ತಿದೆ ಎಂದೂ ಅವರು ಹೇಳಿದ್ದಾರೆ.

ಬಳ್ಳಾರಿ ವರದಿ: ಈ ಮಧ್ಯೆ ಬಳ್ಳಾರಿ ಜಿಲ್ಲೆಯಲ್ಲಿ ಕಾಣಿಸಿಕೊಂಡಿರುವ ಮೆದುಳು ಜ್ವರ ಸೆಪ್ಟೆಂಬರ್‌ 30ರವರೆಗೆ ಎರಡು ಮಕ್ಕಳ ಜೀವವನ್ನು ಬಲಿ ತೆಗೆದುಕೊಂಡಿದೆ. ಜಿಲ್ಲಾ ಮಕ್ಕಳ ಆಸ್ಪತ್ರೆಯಲ್ಲಿ ಮೆದುಳು ಜ್ವರದ 26 ಪ್ರಕರಣಗಳು ದಾಖಲಾಗಿವೆ. ಸಲೀಮಾಭಾನು (5) ಮತ್ತು ಮುಕ್ತಮ್ಮ (5) ಎಂಬ ಎರಡು ಮಕ್ಕಳು ಜ್ವರದಿಂದ ಸಾವನ್ನಪ್ಪಿದ್ದಾರೆ.

ಕಳೆದ ತಿಂಗಳು ಉಡುಪಿ, ಪುತ್ತೂರು, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಾಣಿಸಿಕೊಂಡಿದ್ದ ಇಲಿ ಜ್ವರ ಹತ್ತಾರು ಜನರನ್ನು ಬಲಿ ತೆಗೆದುಕೊಂಡಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

(ಇನ್‌ಫೋ ಇನ್‌ಸೈಟ್‌)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+