ಶ್ರೀಕ್ಷೇತ್ರ ಗೊಮ್ಮಟಗಿರಿಯ ಬಾಹುಬಲಿಗೆ 52ನೇ ಮಸ್ತಕಾಭಿಷೇಕ
ಮೈಸೂರು : ಹುಣಸೂರು ತಾಲೂಕು ಬಿಳಿಕೆರೆ ಹೋಬಳಿಯ ಗೊಮ್ಮಟ ಗಿರಿಯ ಗೊಮ್ಮಟೇಶ್ವರ (ಬಾಹುಬಲಿ)ನಿಗೆ ಭಾನುವಾರ ಮಧ್ಯಾಹ್ನ 52ನೇ ಮಸ್ತಕಾಭಿಷೇಕ ನೆರವೇರಲಿದೆ. ಮಸ್ತಕಾಭಿಷೇಕ ನೋಡಲೆಂದೇ ದೇಶದ ನಾನಾ ಮೂಲೆಗಳಿಂದ ಸಾವಿರಾರು ಜೈನಧರ್ಮೀಯರು ಇಲ್ಲಿಗೆ ಆಗಮಿಸಿದ್ದಾರೆ.
ಹುಣಸೂರಿನಿಂದ 25 ಕಿ.ಮೀಟರ್ ದೂರದಲ್ಲಿರುವ ಶ್ರೀಕ್ಷೇತ್ರದಲ್ಲಿ ನೂರು ಅಡಿ ಎತ್ತರದ ಬೆಟ್ಟದ ಮೇಲೆ ಕೃಷ್ಣವರ್ಣದ ಏಕಶಿಲೆಯಲ್ಲಿ 16 ಅಡಿ ಎತ್ತರದ ಸುಂದರ ಬಾಹುಬಲಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಬೆಟ್ಟವೇರಲು 80 ಮೆಟ್ಟಿಲುಗಳೂ ಇವೆ.
ದೂರದಿಂದ ನೋಡಿದರೆ ರಥದಂತೆ ಗೋಚರಿಸುವ ಈ ಬೆಟ್ಟ, ಬೆಟ್ಟದೂರು ಎಂದೂ ಕರೆಸಿಕೊಂಡಿದೆ. 16 ಅಡಿ ಎತ್ತರದ ಬಾಹುಬಲಿ ಮೂರ್ತಿಯ ಬಲಪಾರ್ಶ್ವದಲ್ಲಿ ಅಂದರೆ ಬೆಟ್ಟದ ಕೆಳಗೆ 24ನೇ ತೀರ್ಥಂಕರ ನೇಮಿನಾಥರ ಪಾದಕೂಟವೂ ಇದೆ. ಇದರ ಮಗ್ಗುಲಲ್ಲೇ ಕೈಲಾಸಗಿರಿ, ಜಿನಮಂದಿರಗಳೂ ಇವೆ.
ಮೈಸೂರಿಗೆ ಕೇವಲ 20 ಕಿ.ಮೀಟರ್ ದೂರದಲ್ಲಿರುವ ಈ ಸುಂದರ ಹಾಗೂ ರಮಣೀಯ ಬೆಟ್ಟದ ಮೇಲೆ ನಿಂತು ಸುತ್ತಲ ಪರಿಸರದತ್ತ ಒಮ್ಮೆ ಕಣ್ಣು ಹಾಯಿಸಿದರೆ ಸಿಗುವ ಆನಂದ ವರ್ಣನಾತೀತ. ಕೃಷ್ಣರಾಜ ಸಾಗರ ಜಲಾಶಯವೂ ಬೆಟ್ಟದಿಂದ ಸುಂದರವಾಗಿ ಕಾಣುತ್ತದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...