‘ದಕ್ಷಿಣ ಕನ್ನಡಕ್ಕೆ ಕೃಷಿ ಜಿಲ್ಲೆ ಎಂಬ ಪಟ್ಟ ಬೇಕು’-ಸರ್ಕಾರ ಒಪ್ಪುತ್ತದಾ?
ಮಂಗಳೂರು : ‘ದಕ್ಷಿಣ ಕನ್ನಡಕ್ಕೆ ಕೃಷಿ ಜಿಲ್ಲೆ ಎಂಬ ಪಟ್ಟ ಬೇಕು’- ಇದು ಸರಕಾರದ ಮುಂದಿರುವ ಹೊಸ ನಮೂನೆಯ ಬೇಡಿಕೆ. ಸಾಲ, ಪರಿಹಾರ, ಮೂಲಭೂತ ಸೌಕರ್ಯಗಳಿಗಾಗಿ ಈ ಆಗ್ರಹ ಅಲ್ಲ. ಬದಲಾಗಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಕೃಷಿ ಜಿಲ್ಲೆ ಎಂದು ಘೋಷಿಸಬೇಕು ಎಂಬ ಬೇಡಿಕೆಯನ್ನು ಜಿಲ್ಲೆಯ ಕೈಗಾರಿಕಾ ಮತ್ತು ವಾಣಿಜ್ಯ ಮಂಡಳಿ ಸರಕಾರವನ್ನು ಆಗ್ರಹಿಸಿದೆ.
ರಾಜ್ಯದಲ್ಲೆಲ್ಲೂ ಮಳೆಯಾಗದಿದ್ದರೂ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಬರ ಪರಿಸ್ಥಿತಿ ಬರುವಷ್ಟು ಮಳೆಯ ಕೊರತೆ ಈ ಬಾರಿ ಬಂದಿಲ್ಲ. ಸುಗ್ಗಿ ಬೆಳೆಗೆ ಮಳೆ ಕಾಣದೇ ದಕ್ಷಿಣ ಕನ್ನಡದಲ್ಲಿ ರೈತರು ಪಂಪ್ಗಳ ಮೊರೆ ಹೋದರೂ ಸಾಲಗಾರ ರೈತರ ಆತ್ಮ ಹತ್ಯೆಯಂತಹ ಪ್ರಕರಣಗಳು ದಕ್ಷಿಣ ಕನ್ನಡದಿಂದ ವರದಿಯಾಗಿಲ್ಲ.
ಆದರೆ ವಾಣಿಜ್ಯ ಮಂಡಳಿಯ ಸದಸ್ಯರು ಈ ಕಾರಣವನ್ನೇ ಅಷ್ಟಾಗಿ ಮುಂದೊಡ್ಡುತ್ತಿಲ್ಲ. ಬದಲಾಗಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಕೃಷಿ ಜಿಲ್ಲೆಯೆಂದು ಘೋಷಿಸುವುದರ ಮೂಲಕ ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆಯಾಗುತ್ತದೆ ಎಂದು ವಾಣಿಜ್ಯ ಮಂಡಳಿಯ ಅಧ್ಯಕ್ಷ ಗಿರಿಧರ್ ಪ್ರಭು ಅವರ ಅಭಿಪ್ರಾಯ.
ಈ ಆಗ್ರಹಕ್ಕೆ ಪೂರಕವಾಗಿ ಕೇಂದ್ರ ಕೃಷಿ ಸಚಿವ ಶ್ರೀಪಾದ್ ನಾಯಕ್ ಈಗಾಗಲೇ ದಕ್ಷಿಣಕನ್ನಡವನ್ನು ಕೃಷಿ ಜಿಲ್ಲೆ ಎಂದು ಘೋಷಿಸುವುದಾಗಿ ವಾಣಿಜ್ಯ ಮಂಡಳಿಗೆ ಭರವಸೆ ಇತ್ತಿದ್ದಾರಂತೆ. ಆದರೆ ಈ ರೀತಿಯ ಬೇಡಿಕೆ ರಾಜ್ಯ ಸರಕಾರದ ಮೂಲಕ ಕೇಂದ್ರವನ್ನು ತಲುಪಬೇಕು ಎಂಬ ಷರತ್ತನ್ನೂ ಸಚಿವರು ಹಾಕಿದ್ದರಿಂದ ವಾಣಿಜ್ಯ ಮಂಡಳಿಯವರ ಸದ್ಯದ ಬೇಡಿಕೆ ಮತ್ತು ಮನವಿ ರಾಜ್ಯ ಸರಕಾರದ ಮುಂದಿದೆ.
ದಕ್ಷಿಣ ಕನ್ನಡ ಕೃಷಿ ಜಿಲ್ಲೆ ಎಂಬುದರಲ್ಲಿ ಎರಡನೇ ಮಾತಿಲ್ಲ ಎನ್ನುವುದು ಗಿರಿಧರ್ ಅವರ ಅಂಬೋಣ. ಯಾಕೆಂದರೆ ವಾಣಿಜ್ಯ ಬೆಳೆಗಳಾದ ಗೇರು, ಅಡಿಕೆ , ತೆಂಗು, ಭತ್ತ, ಕಬ್ಬು, ವೆನಿಲ್ಲ, ಮಾವು, ಕಾಳು ಮೆಣಸು ಬೆಳೆಗಳನ್ನು ಇಲ್ಲಿ ಬೆಳೆಯಲಾಗುತ್ತದೆ. ಈ ಕೃಷಿ ಬೆಳೆಗಳನ್ನು ಇನ್ನಷ್ಟು ಆಧುನಿಕ ರೀತಿಯಲ್ಲಿ ಹೆಚ್ಚು ಹೆಚ್ಚು ಬೆಳೆಯುವ ಕುರಿತು ಸರಕಾರ ಯೋಚಿಸಬೇಕು ಎಂಬುದು ಮಂಡಳಿಯ ನಿವೇದನೆ.
(ಇನ್ಫೋ ವಾರ್ತೆ)