ನಾಟಕ ಅಕಾಡೆಮಿ ಅಧ್ಯಕ್ಷ ನಾಗೇಶ್ ಹಲ್ಲು ಮುರಿದ ವರ್ತಕರು
ಬೆಂಗಳೂರು : ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಕೆಲವು ವ್ಯಾಪಾರಸ್ಥರು ಗದ್ದಲ ಎಬ್ಬಿಸಿದ್ದನ್ನು ಪ್ರತಿಭಟಿಸಿದ ನಾಟಕ ಅಕಾಡೆಮಿ ಅಧ್ಯಕ್ಷ ನಾಗೇಶ್ ಅವರ ಮೇಲೆ ದಾರುಣ ಹಲ್ಲೆ ನಡೆದಿದೆ.
3 ದಿನಗಳ ಕಾಲ ಹಳೆಯ ನಾಟಕಗಳ ಉತ್ಸವದ ಎರಡನೇ ದಿನ ಗುರುವಾರ, ಟಿ.ಎನ್.ಸೀತಾರಾಂ ಅವರ ನಮ್ಮೊಳಗೊಬ್ಬ ನಾಜೂಕಯ್ಯ ನಾಟಕ ಪ್ರದರ್ಶನ ಏರ್ಪಾಟಾಗಿತ್ತು. ಸಂಜೆಯಿಂದಲೇ ಸಾಕಷ್ಟು ಸಂಖ್ಯೆಯಲ್ಲಿ ರಂಗಾಸಕ್ತರು ಸೇರುತ್ತಿದ್ದರು. ಅದೇ ಸಮಯದಲ್ಲಿ ನಯನ ಸಭಾಂಗಣದಲ್ಲಿ ಕೆಲವು ವರ್ತಕರ ಖಾಸಗಿ ಸಮಾರಂಭ ಏರ್ಪಾಟಾಗಿತ್ತು. ಅದು ಸಮಾರಂಭ ಎನ್ನುವುದಕ್ಕಿಂತ ಮೋಜಿನ ಪರಾಕಾಷ್ಠೆಯಾಯಿತು.
ಆ ಕಾರ್ಯಕ್ರಮಕ್ಕೆ ಬಂದ ಅನೇಕರು ಕಾರುಗಳನ್ನು ಕಲಾಕ್ಷೇತ್ರದ ಆವರಣದಲ್ಲಿ ಜನರಿಗೆ ತೊಂದರೆ ಆಗುವಂತೆ ನಿಲ್ಲಿಸಿದರು. ಸಾಲದ್ದಕ್ಕೆ ಧ್ವನಿವರ್ಧಕವನ್ನು ಕಿವಿಗಡಚಿಕ್ಕುವಂತೆ ಹಾಕಿದರು. ನಾಟಕ ಅಕಾಡೆಮಿ ಅಧ್ಯಕ್ಷ ನಾಗೇಶ್ ಇದನ್ನು ಪ್ರತಿಭಟಿಸಿ, ಗೊಂದಲ ನಿಲ್ಲಿಸುವಂತೆ ಕೋರಿದರು. ಇದಕ್ಕೆ ಅವರಿಗೆ ಸಿಕ್ಕ ಬಹುಮಾನ ಹಲ್ಲುಮುರಿತ ! ನಾಗೇಶ್ ಅವರ ಮೋರೆಗೆ ವರ್ತಕರು ಎಗ್ಗಿಲ್ಲದ್ದೆ ಹೊಡೆದರು. ನಾಗೇಶ್ ಅವರ ತುಟಿ ಸೀಳಿದ್ದು, ಕೆಲವು ಹಲ್ಲುಗಳೂ ಉದುರಿದವು. ಈ ಕೆಲಸ ಮಾಡಿದವರು ಮನಿ ಚೈನ್ ಲಿಂಕ್ಸ್ ಯೋಜನೆಯ ಪ್ರವರ್ತಕರಾಗಿದ್ದು, ಮದ್ಯಪಾನ ಮಾಡಿದ್ದರು ಎನ್ನಲಾಗಿದೆ.
ಪ್ರತಿಭಟನೆ : ನಾಟಕ ಅಕಾಡೆಮಿ ಅಧ್ಯಕ್ಷ ನಾಗೇಶ್ ಮೇಲಿನ ಹಲ್ಲೆಯನ್ನು ರಂಗಭೂಮಿ ಕ್ರಿಯಾ ಸಮಿತಿ ತೀವ್ರವಾಗಿ, ಖಂಡಿಸಿದ್ದು, ಶುಕ್ರವಾರ ಸಂಜೆ ಈ ದೃಷ್ಕುೃತ್ಯದ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಸಮಿತಿಯ ಅಧ್ಯಕ್ಷ ಸಿ.ಜಿ.ಕೃಷ್ಣಸ್ವಾಮಿ ಹೇಳಿದ್ದಾರೆ.
(ಇನ್ಫೋ ವಾರ್ತೆ)