ನ.1ರಿಂದ ಬೆಂಗಳೂರಿನಿಂದ ವಿಮಾನ ಏರಿದರೆ 200 ರು. ಸರ್ಚಾರ್ಜ್
ನವದೆಹಲಿ : ನವೆಂಬರ್ 1ರಿಂದ ಬೆಂಗಳೂರು ವಿಮಾನ ನಿಲ್ದಾಣದಿಂದ ಯಾವುದೇ ವಿಮಾನ ಏರುವ ಪ್ರಯಾಣಿಕರು 200 ರುಪಾಯಿ ಸರ್ಚಾರ್ಜ್ ನೀಡಲೇಬೇಕು. ರಾಜ್ಯ ಸರಕಾರದ ಈ ಕೋರಿಕೆಗೆ ಕೇಂದ್ರ ಸರಕಾರ ಗುರುವಾರ ಸಮ್ಮತಿ ನೀಡಿದೆ.
ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಪನ್ಮೂಲ ಕ್ರೋಡೀಕರಿಸಲು, ಬೆಂಗಳೂರು ವಿಮಾನ ನಿಲ್ದಾಣದಿಂದ ಪ್ರಯಾಣಿಸುವ ಪ್ರಯಾಣಿಕರಿಂದ ಸರ್ಚಾರ್ಜ್ ವಸೂಲಿ ಮಾಡಬೇಕು ಎಂಬ ಸಲಹೆಯನ್ನು ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಬಹು ಹಿಂದೆಯೇ ಮಂಡಿಸಿದ್ದರು.
ಮೇಖ್ರೀ ವೃತ್ತದ ರೋಡ್ ಸಪರೇಟರ್ ಉದ್ಘಾಟನೆ ಸಂದರ್ಭದಲ್ಲಿ ಸಹ ಅವರು ಈ ವಿಷಯ ಪ್ರಸ್ತಾಪಿಸಿದ್ದರು. ಈ ಸಂಬಂಧ ಕೇಂದ್ರದ ಮೇಲೆ ಒತ್ತಡ ಹೇರುವಂತೆ ರಾಜ್ಯದ ಸಂಸದರನ್ನೂ ಕೋರಿದ್ದರು. ಆದರೆ, ರಾಜ್ಯ ಸರಕಾರದ ಈ ಮನವಿಯನ್ನು ಹಿಂದಿನ ನಾಗರಿಕ ವಿಮಾನಯಾನ ಸಚಿವ ಶರದ್ ಯಾದವ್ ಪುರಸ್ಕರಿಸಿರಲಿಲ್ಲ.
ಗುರುವಾರ ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಕೃಷ್ಣ ಹಾಗೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನೆ ವ್ಯವಸ್ಥಾಪಕ ನಿರ್ದೇಶಕ ಜೈರಾಜ್ ಅವರು, ನೂತನ ವಿಮಾನ ಯಾನ ಸಚಿವ ಷಾನವಾಜ್ ಹುಸೇನ್ ಅವರನ್ನು ಭೇಟಿ ಮಾಡಿ, ಚರ್ಚಿಸಿ, ಸರ್ಚಾರ್ಜ್ ವಸೂಲಿಗೆ ಅನುಮೋದನೆ ಪಡೆದರು.
ಇದರಿಂದ ಸಂಗ್ರಹವಾಗುವ ಹೆಚ್ಚುವರಿ ಹಣದಲ್ಲಿ ಶೇ.30 ಭಾಗ ಕೇಂದ್ರಕ್ಕೆ ಸಲ್ಲಲಿದ್ದು, ಉಳಿದ ಶೇ.70ರಷ್ಟು ರಾಜ್ಯಕ್ಕೆ ದೊರಕಲಿದೆ. ಸರ್ಚಾರ್ಜ್ನಿಂದ ಪ್ರತಿವರ್ಷ 13 ರಿಂದ 14 ಕೋಟಿ ರುಪಾಯಿ ದೊರಕಲಿದೆ ಎಂದು ಅಂದಾಜು ಮಾಡಲಾಗಿದೆ. ಈ ವಿಷಯವನ್ನು ಎಸ್.ಎಂ. ಕೃಷ್ಣ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಇಲ್ಲಿ ತಿಳಿಸಿದರು. ವಿಮಾನ ನಿಲ್ದಾಣ ಯೋಜನೆ ಪ್ರಗತಿಯಲ್ಲಿದೆ ಎಂದೂ ಅವರು ಹೇಳಿದರು.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...