ಶೀಘ್ರವೇ ಐ.ಟಿ - ಟೆಲಿಕಾಂ ಸಚಿವಾಲಯಗಳ ವಿಲೀನ: ಮಹಾಜನ್
ನವದೆಹಲಿ : ತಮ್ಮ ವ್ಯಾಪ್ತಿಯಲ್ಲಿರುವ ಸಂಪರ್ಕ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯಗಳೆರಡನ್ನೂ ವಿಲೀನಗೊಳಿಸುವ ಇಂಗಿತವನ್ನು ಕೇಂದ್ರ ಸಚಿವ ಪ್ರಮೋದ್ ಮಹಾಜನ್ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ತಾವು ಈಗಾಗಲೇ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಅನುಮತಿ ಕೋರಿರುವುದಾಗಿಯೂ ಅವರು ಹೇಳಿದ್ದಾರೆ.
ರಾಮ್ ವಿಲಾಸ್ ಪಾಸ್ವಾನ್ ಅವರ ಬಳಿಯಿದ್ದ ಸಂಪರ್ಕ ಖಾತೆಯನ್ನು ಪ್ರಮೋದ್ ಮಹಾಜನ್ ಅವರಿಗೆ ವಹಿಸಿಕೊಟ್ಟ ಒಂದು ತಿಂಗಳ ಅವಧಿಯಾಳಗೇ ಅವರು ಈ ನಿರ್ಧಾರವನ್ನು ಕೈಗೊಂಡಿದ್ದಾರೆ. ತಾವು ಈ ಎರಡೂ ಸಚಿವಾಲಯನ್ನು ವಿಲೀನಗೊಳಿಸುವ ನಿರ್ಧಾರ ಕೈಗೊಂಡಿದ್ದು, ಐ.ಟಿ. ಮತ್ತು ಟೆಲಿಕಾಂಗಳನ್ನು ಒಂದುಗೂಡಿಸಲು ಪ್ರಧಾನಿಯವರನ್ನು ಕೋರಿರುವುದಾಗಿ ಅವರು ಹೇಳಿದ್ದಾರೆ.
ಈ ಎರಡೂ ಸಚಿವಾಲಯಗಳನ್ನು ವಿಲೀನಗೊಳಿಸಿ, ಒಂದೇ ಸಚಿವಾಲಯ ಮಾಡುವುದರಿಂದ ಭಾರಿ ಸುಧಾರಣೆಯನ್ನೇ ನಿರೀಕ್ಷಿಸಬಹುದಾಗಿದೆ. ಇದು ವಿಶ್ವಆರ್ಥಿಕ ಹಿನ್ನಡೆಯನ್ನು ಸಮರ್ಥವಾಗಿ ನಿಭಾಯಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ಜಾಗತಿಕ ಟೆಲಿಕಾಂ ಶೃಂಗ 2001ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು, ಸಂವಹನದ ಎರಡೂ ಇಲಾಖೆಗಳನ್ನು ಪ್ರತ್ಯೇಕವಾಗಿಡುವುದು ಸೂಕ್ತವಲ್ಲ. ಈ ಎರಡನ್ನೂ ಒಂದೇ ಸಚಿವಾಲಯದಡಿ ತರಬೇಕು ಎಂದರು. ತಮ್ಮ ಈ ಇಂಗಿತಕ್ಕೆ ಪ್ರಧಾನಿಯವರು ಸಮ್ಮತಿಸುತ್ತಾರೆ ಎಂಬ ಆಶಾಭಾವನೆ ವ್ಯಕ್ತಪಡಿಸಿದ ಅವರು, ಒಂದೆರಡು ವಾರದಲ್ಲೇ ಇದು ಕೈಗೂಡುತ್ತದೆ ಎಂದರು.
ಪ್ರಸ್ತುತ ಐ.ಟಿ. ಹಾಗೂ ಟೆಲಿಕಾಂಗೆ ಪ್ರತ್ಯೇಕವಾದ ರಾಷ್ಟ್ರೀಯ ಸಲಹಾ ಸಮಿತಿಗಳಿವೆ. ವಿಲೀನ ಪ್ರಕ್ರಿಯೆ ಕಾರ್ಯರೂಪಕ್ಕೆ ಬಂದ ಕೂಡಲೇ ಒಂದೇ ಸಮಾಲೋಚನಾ ಸಮಿತಿ ಹಾಗೂ ರಾಷ್ಟ್ರೀಯ ಸಲಹಾ ಸಮಿತಿಯನ್ನು ರಚಿಸಲಾಗುವುದು ಎಂದು ಮಹಾಜನ್ ಹೇಳಿದರು.
(ಪಿ.ಟಿ.ಐ)