5 ಬಿತ್ತನೆ ಬೀಜಗಳಿಗೆ ಶೇ.25 ಸಬ್ಸಿಡಿ, ಕೃಷಿ ಬೆಂಬಲ ಬೆಲೆಯಲ್ಲೂ ಹೆಚ್ಚಳ
ಬೆಂಗಳೂರು : ಬರದ ಹೊಡೆತದಿಂದ ರೈತರು ಹೊರಬರಲು ಹಾಗೂ ಉತ್ಪನ್ನ ಹೆಚ್ಚಿಸಲು ಸಣ್ಣ ಪ್ರಮಾಣದ ಬೆಳೆಗಾರರಿಗೆ ಬಿತ್ತನೆ ಬೀಜದಲ್ಲಿ ಪ್ರತಿಶತ 25ರಷ್ಟು ರಿಯಾಯಿತಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ರಾಜ್ಯ ಕೃಷಿ ಸಚಿವ ಟಿ.ಬಿ.ಜಯಚಂದ್ರ ಗುರುವಾರ ಸುದ್ದಿರಾರರಿಗೆ ಈ ವಿಷಯ ತಿಳಿಸಿದರು. ಜೋಳ, ಗೋಧಿ, ಉದ್ದು, ಸೂರ್ಯಕಾಂತಿ ಹಾಗೂ ಕುಸುಂಬೆ ಬಿತ್ತನೆ ಬೀಜಗಳಿಗೆ ಮಾತ್ರ ಈ ರಿಯಾಯಿತಿ ಅನ್ವಯವಾಗಲಿದೆ. ಕರ್ನಾಟಕ ಬಿತ್ತನೆ ಬೀಜ ನಿಗಮ ಬೀಜ ಸಂಗ್ರಹಿಸಿ, ರೈತರಿಗೆ ವಿತರಿಸಲಿದೆ ಎಂದರು.
ರೈತರ ವಿವಿಧ ಬೆಳೆಗಳಿಗೆ ಕೊಡುತ್ತಿದ್ದ ಬೆಂಬಲ ಬೆಲೆಯಲ್ಲಿಯೂ 20ರಿಂದ 170 ರುಪಾಯಿವರೆಗೆ ಹೆಚ್ಚಳ ಮಾಡಲಾಗಿದೆ. ತೊಗರಿ ಬೇಳೆಗೆ ಈ ಹಿಂದೆ ಕ್ವಿಂಟಾಲ್ಗೆ 1200 ರುಪಾಯಿ ಬೆಂಬಲ ಬೆಲೆ ಇತ್ತು. ಈಗ 120 ರುಪಾಯಿ ಹೆಚ್ಚಿಸಲಾಗಿದೆ. ರಾಗಿ ಬೆಂಬಲ ಬೆಲೆಯನ್ನು 40 ರುಪಾಯಿ(ಹಿಂದಿನ ಬೆಂಬಲ ಬೆಲೆ 445 ರು.) ಹಾಗೂ ಹತ್ತಿ ಬೆಲೆಯನ್ನು 50 ರುಪಾಯಿ ಹೆಚ್ಚಿಸಲಾಗಿದೆ (ಹಿಂದಿನ ಬೆಂಬಲ ಬೆಲೆ 1625ರು.). ರಾಜ್ಯದಲ್ಲಿ ಮಳೆ ಸಾಕಷ್ಟು ಆಗುತ್ತಿದ್ದು, ಬರ ಪರಿಸ್ಥಿತಿಯಿಂದ ರೈತರು ಹೊರಬರುವಂತಾಗಿದೆ. ಇನ್ನು ಕನಿಷ್ಠ 15 ದಿನಗಳವರೆಗೆ ಮಳೆಯಾಗುವ ಒಳ್ಳೆ ಸುದ್ದಿಯನ್ನು ಹವಾಮಾನ ಇಲಾಖೆ ಕೊಟ್ಟಿದೆ ಎಂದು ಸಚಿವರು ಸಂತೋಷ ವ್ಯಕ್ತಪಡಿಸಿದರು.
ಪ್ರಶ್ನೆಯಾಂದಕ್ಕೆ ಉತ್ತರಿಸುತ್ತಿದ್ದ ಜಯಚಂದ್ರ, ಜೈವಿಕ ತಂತ್ರಜ್ಞಾನ ಪಾರ್ಕ್ ಸ್ಥಾಪನೆಗೆ ಗಾಂಧಿ ಕೃಷಿ ವಿದ್ಯಾ ಕೇಂದ್ರ (ಜಿಕೆವಿಕೆ) ದ ಪ್ರದೇಶದಲ್ಲಿ 100 ಎಕರೆ ಜಾಗೆ ಮಂಜೂರು ಮಾಡುವ ವಿಷಯದಲ್ಲಿ ಯಾವುದೇ ಗೊಂದಲಗಳಿಲ್ಲ ಎಂದು ಸ್ಪಷ್ಟಪಡಿಸಿದರು. ಜಿಕೆವಿಕೆ ವಿದ್ಯಾರ್ಥಿಗಳು ಜಾಗೆ ಮಂಜೂರಾತಿಗೆ ವಿರೋಧ ವ್ಯಕ್ತಪಡಿಸಿರುವುದನ್ನು ಇಲ್ಲಿ ಸ್ಮರಿಸಬಹುದು.
(ಪಿಟಿಐ)