ಮುಳೂರು ಘಾಟ್ ಬಳಿ ಟ್ರಾಕ್ಟರ್ ಉರುಳಿ 8 ಜನರ ಸಾವು
ಬೆಂಗಳೂರು : ಬೆಳಗಾವಿ ಜಿಲ್ಲೆ ರಾಮದುರ್ಗ ಸಮೀಪದ ಮುಳೂರು ಘಾಟ್ ಬಳಿ ಗುರುವಾರ ಮಧ್ಯಾಹ್ನ 12 ಗಂಟೆ ಸಮಯದಲ್ಲಿ ಟ್ರಾಕ್ಟರ್ ಒಂದು ಹಳ್ಳಕ್ಕೆ ಉರುಳಿ ಕನಿಷ್ಠ 8 ಮಂದಿ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇವರಲ್ಲಿ 6 ಜನರ ಸ್ಥಿತಿ ಗಂಭೀರವಾಗಿದೆ.
ಸಂಬಂಧಿಕರೊಬ್ಬರ ಶವಸಂಸ್ಕಾರಕ್ಕೆಂದು ತೆರಳುತ್ತಿದ್ದ ಇವರು ತಾವೇ ಶವವಾಗಿ ಹೋದರು. ರಾಮದುರ್ಗದಿಂದ ಸಿರಸಿಂಗಿ ಗ್ರಾಮಕ್ಕೆ ತೆರಳುತ್ತಿದ್ದ ಟ್ರಾಕ್ಟರ್ನಲ್ಲಿ ಸುಮಾರು 50ಜನರು ಪ್ರಯಾಣಿಸುತ್ತಿದ್ದರು. ಮುಳೂರು ಘಾಟ್ ತಿರುವಿನ ಬಳಿ ಅತಿ ವೇಗದಿಂದ ಬರುತ್ತಿದ ಟ್ರಾಕ್ಟರ್ ಹತೋಟಿ ತಪ್ಪಿ ಹಳ್ಳಕ್ಕೆ ಉರುಳಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಸಾವನ್ನಪ್ಪಿದ ಎಂಟು ಜನರ ಪೈಕಿ ಐವರು ಒಂದೇ ಕುಟುಂಬದವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಾಳುಗಳನ್ನು ರಾಮದುರ್ಗ ಮತ್ತು ಬೆಳಗಾವಿಯ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಸಾವನ್ನಪ್ಪಿದ ನಾಲ್ವರನ್ನು ರಾಮದುರ್ಗದ ಭೀಮವ್ವ, ಗಂಗವ್ವ, ಲಚ್ಚಮ್ಮ, ಶಾಂತವ್ವ ಸೆಲೆಗಾರ ಎಂದು ಗುರುತಿಸಲಾಗಿದೆ.
(ಇನ್ಫೋ ವಾರ್ತೆ)