ಗ್ರೀನ್ಬೆಲ್ಟ್ ಜಾಗೆ ಗುಳುಂ, ಬೇಲಿಯೇ ಎದ್ದು ಹೊಲ ಮೇಯ್ದಿದೆ ಸರ್ವಜ್ಞ
ಬೆಂಗಳೂರು : ಇತ್ತೀಚೆಗೆ ನಗರಕ್ಕೆ ಬಂದಿದ್ದ ಫ್ರೆಂಚ್ ಲೇಖಕ ಡಾಮಿನಿಕ್ ಲ್ಯಾಪಿಯರ್ ಉದ್ಯಾನನಗರಿಗೆ ಕೊಳೆ ಮೆತ್ತಿದೆ, ಅದ ತೊಳೆಯಿರಿ ಅಂತ ಹೇಳಿದರು. ಇದು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕಿವಿಗೆ ಬಿದ್ದಿತೋ ಇಲ್ಲವೋ, ಆದರೆ ಇನ್ನು ಕೆಲವೇ ದಿನಗಳಲ್ಲಿ ಎರಗಲಿರುವ ಸುದ್ದಿ ಮಾಜಿ ಹಾಲಿ ಹೇಮಾಹೇಮಿಗಳ ಸದ್ದಡಗಿಸುವಷ್ಟು ಬಲವಾಗಿದೆ. ಬೇಲಿಯೇ ಎದ್ದು ಹೊಲ ಮೇಯ್ದ ಪ್ರಕರಣ ಪುಂಖಾನುಪುಂಖ ಬಿಚ್ಚಿಕೊಳ್ಳುತ್ತಿದೆ. ಇದು ನಗದ ಗ್ರೀನ್ಬೆಲ್ಟ್ ಜಾಗೆಯಲ್ಲಿ ಹಸುರು ಅಳಿಸಿರುವ ಸುದ್ದಿ...
ಬೆಂಗಳೂರಿನ ಗ್ರೀನ್ಬೆಲ್ಟ್ ಪ್ರದೇಶದ ನಾಲ್ಕನೇ ಮೂರು ಪಾಲು ಜಾಗೆಯಲ್ಲಿ ಹಸುರಿಲ್ಲ, ಬದಲಿಗೆ ಅಕ್ರಮ ಕಟ್ಟಡ ವಗೈರೆಗಳಿವೆ. ಗುಳೇ ಬಂದವರಿಗೆ ರೆಡ್ ಕಾರ್ಪೆಟ್ ಹಾಸುತ್ತಿರುವ ಮಾಜಿ ಪರಿಸರ ಪ್ರೇಮಿ ಬೆಂಗಳೂರಲ್ಲಿ ಜೀವಾನಿಲಕ್ಕೆ ಕುತ್ತು ಬಂದಿರುವುದಕ್ಕೆ ಇದೂ ಒಂದು ಕಾರಣವಲ್ಲವೇ? ಬಿಡಿಎಗೆ ಬಿಸಿ ತಟ್ಟಿದೆ. ಚುರುಕಾಗಿರುವ ಅದು 89 ಮಂದಿ ಹಾಗೂ ಸಂಸ್ಥೆಗಳಿಗೆ ನೋಟಿಸ್ ಕೊಟ್ಟಿದೆ. ಇನ್ನೂ ಇನ್ನೂರು ಚಿಲ್ಲರೆ ನೋಟಿಸು ಸಿದ್ಧವಾಗುತ್ತಿವೆ.
ಹೈಕೋರ್ಟ್ ಕಮಿಷನರ್ ಪ್ರಭಾ ಮೂರ್ತಿ ಸಿದ್ಧಪಡಿಸಿರುವ ವರದಿಯಲ್ಲಿ ನೋಟಿಸ್ ಕೊಡಲು ಸಿದ್ಧಮಾಡಿರುವವರ ಹೆಸರಿನ ಪಟ್ಟಿ ಉದ್ದವಿದೆ- ಮಾಜಿ ಸಂಸತ್ ಸದಸ್ಯ ಸಿ.ಕೆ.ಜಾಫರ್ ಷರೀಫ್, ಮಾಜಿ ಮಂತ್ರಿ ಸಿ.ಎಂ.ಇಬ್ರಾಹಿಂ, ಮೊನ್ನೆ ತಾನೆ ನೆಲಮಂಗಲ ಬಳಿ ಮಗಳನ್ನು ಹೃತಿಕ್ಗೆ ಕೊಟ್ಟು ಮದುವೆ ಮಾಡಿದ ವಿದ್ಯುತ್ ಚೋರ ಸಂಜಯ್ ಖಾನ್, ಕಂಟ್ರಿ ಕ್ಲಬ್, ಕೋಡೇಸ್ ಡಿಸ್ಟಿಲರ್ಸ್, ಐಟಿಐ ಹೌಸ್ ಬಿಲ್ಡಿಂಗ್ ಸೊಸೈಟಿ, ಇಲೆಕ್ಟ್ರಾನಿಕ್ ರಿಸರ್ಚ್ ಲಿಮಿಟೆಡ್ ಆಫ್ ಬಿಪಿಎಲ್, ಸಾಯಿ ಆಶ್ರಮ, ಸತ್ಯ ಸಾಯಿ ಗೋಕುಲಂ.... .
ನಗರ ಯೋಜನೆ (ಟೌನ್ ಪ್ಲಾನಿಂಗ್) ಇಲಾಖೆಯ ಸದಸ್ಯ ಪಿ.ಎಸ್.ಮುದ್ದಪ್ಪ ಹೇಳುವಂತೆ ಅಕ್ರಮ ಕಟ್ಟಡಗಳ ಮಾಲೀಕರು ಅಥವಾ ಸಂಸ್ಥೆಗಳ ಸಂಖ್ಯೆ 300 ಮುಟ್ಟಿದೆ. ಈಗಾಗಲೇ 89 ನೋಟಿಸ್ಗಳನ್ನು ಬಿಡಿಎ ಕಳುಹಿಸಿದೆ. ಆದರೆ ಉತ್ತರ ಬಂದಿರುವುದು 26 ನೋಟಿಸ್ಗಳಿಗೆ ಮಾತ್ರ.
ಅಂದಹಾಗೆ, ನೋಟಿಸ್ ತಲುಪಿರುವವರಲ್ಲಿ ಅನೇಕರು ಸಮ್ಮತಿ ಪತ್ರ ಪಡೆದೇ ಕಟ್ಟಡ ಕಟ್ಟಿಸಿರುವುದಾಗಿ ಕ್ಲೇಮ್ ಮಾಡುತ್ತಿದ್ದಾರೆ. ಸಂಜಯ್ ಖಾನ್ಗೆ ಗ್ರಾಮ ಪಂಚಾಯಿತಿ ಅನುಮತಿ ಕೊಟ್ಟಿದೆಯಂತೆ. ಹೀಗೇ ಆಡಳಿತವಾಗಿ ಸಾಕಷ್ಟು ಗೋಲ್ಮಾಲ್ ಆಗಿದೆ. ಈ ಹೊತ್ತೂ ಬೋಗಸ್ ದಾಖಲೆಗಳನ್ನು ಸೃಷ್ಟಿಸುವುದು ಕಷ್ಟವೇನೂ ಆಗುತ್ತಿಲ್ಲ. ಇನ್ನು ಕೆಲವರು ನೋಟಿಸನ್ನು ನ್ಯೂಸ್ಪೇಪರ್ನಷ್ಟೇ ಸಲೀಸಾಗಿ ಓದಿ, ಕಪಾಟು ಸೇರಿಸಿ ಬಿಟ್ಟಿದ್ದಾರೆ. ಆದರೂ ಬಿಡಿಎ ನೋಟಿಸ್ ವಿಲೇವಾರಿ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಲೇ ಇದೆ!
(ಇನ್ಫೋ ವಾರ್ತೆ)
ಗುರುಮ ಘಾತುಕರ ಬಗ್ಗೆ ನಿಮ್ಮದೆರಡು ಮಾತಿರಲಿ....