ಹಿಂಗಾರು ಚುರುಕು : ಲೋಡ್ಷೆಡ್ಡಿಂಗ್ ನಿರ್ಧಾರ ಪುನರ್ಪರಿಶೀಲನೆ
ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟರೂ, ಹಿಂಗಾರು ಮಳೆ ವ್ಯಾಪಕವಾಗಿ ಸುರಿಯುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್ ಲೋಡ್ ಷೆಡ್ಡಿಂಗ್ ನಿರ್ಧಾರವನ್ನು ಪುನರ್ ಪರಿಶೀಲಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಈ ವಿಷಯವನ್ನು ಇಂಧನ ಸಚಿವ ವೀರಕುಮಾರ್ ಪಾಟೀಲ್ ತಿಳಿಸಿದ್ದಾರೆ.
ಸಚಿವ ಸಂಪುಟ ಸಭೆಯಲ್ಲಿ ವಿದ್ಯುತ್ ಲೋಡ್ ಷೆಡ್ಡಿಂಗ್ ಜಾರಿ ಬಗ್ಗೆ ನಿರ್ಧಾರ ಕೈಗೊಳ್ಳುವಂತೆ ಕೋರಿ ಕೆಪಿಟಿಸಿಎಲ್ ಪ್ರಸ್ತಾವನೆ ಕಳಿಸಿತ್ತು ಆದರೆ, ವಿದ್ಯುತ್ ಕಡಿತ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಕೆ.ಪಿ.ಟಿ.ಸಿ.ಎಲ್ಗೆ ಸೂಚಿಸಲಾಗಿದೆ ಎಂದೂ ಅವರು ಹೇಳಿದರು.
ಮುಂಗಾರು ಮಳೆ ಕೈಕೊಟ್ಟ ಕಾರಣ ರಾಜ್ಯದಲ್ಲಿ ವಿದ್ಯುತ್ ಉತ್ಪಾದನೆ ಕುಸಿದಿತ್ತು. ಹೀಗಾಗಿ ವಿದ್ಯುತ್ ಲೋಡ್ಷೆಡ್ಡಿಂಗ್ ಜಾರಿ ಮಾಡುವ ನಿರ್ಧಾರವನ್ನು ಕೆ.ಪಿ.ಟಿ.ಸಿ.ಎಲ್. ತೆಗೆದುಕೊಂಡಿತ್ತು. ಈಗ ಪರಿಸ್ಥಿತಿ ಸುಧಾರಣೆಯಾಗುತ್ತಿದೆ. ವಿದ್ಯುತ್ ಉತ್ಪಾದನೆ ಹೆಚ್ಚುವ ಸಂಭವ ಇದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ 59,351 ಮಿಲಿಯನ್ ಯುನಿಟ್ ವಿದ್ಯುತ್ ಬೇಡಿಕೆ ಇದೆ. 22,974 ಮಿಲಿಯನ್ ಯುನಿಟ್ ಅನ್ನು ಬೇರೆಡಿಯಿಂದ ತರಿಸಿಕೊಳ್ಳಲಾಗುತ್ತಿದೆ. ಕೇಂದ್ರ ವಿದ್ಯುತ್ ಜಾಲದಿಂದ 300 ಮೆಗಾ ಯುನಿಟ್ ವಿದ್ಯುತ್ ಪಡೆವ ಸಂಬಂಧ ವ್ಯವಹಾರ ಪ್ರಗತಿಯಲ್ಲಿದ್ದು, ಕೇಂದ್ರ ಸಮ್ಮತಿ ಸಿಕ್ಕ ಕೂಡಲೇ ರಾಜ್ಯ ಸರಕಾರ ವಿದ್ಯುತ್ ಖರೀದಿಸುವುದು ಎಂದು ಅವರು ಹೇಳಿದರು.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...