ಕೇಬಲ್ ಆಪರೇಟರ್ - ಸ್ಟಾರ್ಟಿವಿ ಯುದ್ಧದಲ್ಲಿ ಮಂಕಾದ ಕೆ.ಬಿ.ಸಿ.
ಬೆಂಗಳೂರು : ಸ್ಟಾರ್ ಟಿ.ವಿ. ಜಾಲ ತನ್ನ ಚಾನೆಲ್ಗಳ ಪ್ರಸಾರಕ್ಕೆ ಇಂತಿಷ್ಟು ಹಣ ನೀಡಬೇಕು ಎಂದು ಕೇಬಲ್ ಆಪರೇಟರ್ಗಳಿಗೆ ತಿಳಿಸಿದೆ. ಸ್ಟಾರ್ ಟಿವಿ ವಿಧಿಸಿರುವ ದರ ದುಬಾರಿ ಎಂದು ಬೆಂಗಳೂರಿನ ಕೆಲವು ಬಡಾವಣೆಯ ಕೇಬಲ್ ಆಪರೇಟರ್ಗಳು ಸ್ಟಾರ್ ಟಿವಿ ಬಳಗದ ಚಾನೆಲ್ಗಳ ಪ್ರಸಾರವನ್ನೇ ನಿಲ್ಲಿಸಿದ್ದಾರೆ.
ಕೇಬಲ್ ಆಪರೇಟರ್ ಹಾಗೂ ಸ್ಟಾರ್ ಟಿವಿ ಹೋರಾಟದ ಪರಿಣಾಮವಾಗಿ ಬೆಂಗಳೂರಿನ ಬಾಲೆ ಕೌನ್ ಬನೇಗ ಕರೋಡ್ಪತಿ (ಜೂನಿಯರ್)ಯಲ್ಲಿ ಭಾಗವಹಿಸಿ, ಲಕ್ಷಾಂತರ ರುಪಾಯಿ ಗೆದ್ದ ರಸಕ್ಷಣಗಳನ್ನು ನೋಡುವ ಭಾಗ್ಯ ಕೆಲವು ಬಡಾವಣೆಗಳ ಬೆಂಗಳೂರಿಗರಿಗೆ ಇಲ್ಲವಾಯ್ತು.
ಸೆಪ್ಟೆಂಬರ್ 16ರಂದು ಪ್ರಸಾರವಾದ ಕಾರ್ಯಕ್ರಮದಲ್ಲಿ 6,40,000 ಗೆದ್ದಿದ್ದ ಬೆಂಗಳೂರಿನ ಭಾರ್ಗವಿ, ರೋಲ್ ಓವರ್ ಸ್ಪರ್ಧಿಯಾಗಿದ್ದರು. ಆ ಹುಡುಗಿ ಮತ್ತೆಷ್ಟು ಹಣ ಗೆಲ್ಲುತ್ತಾಳೆ ನೋಡಬೇಕು ಎಂದು ಕಾದಿದ್ದ ಬೆಂಗಳೂರಿಗರಿಗೆ 23ರಂದು ಸ್ಟಾರ್ಪ್ಲಸ್ ನೋಡುವ ಭಾಗ್ಯ ದೊರಕಲೇ ಇಲ್ಲ.
ಕೇಬಲ್ ಆಪರೇಟರ್ಗಳು ಪ್ರಸಾರ ನಿಲ್ಲಿಸಿ, ದರ ಇಳಿಸುವಂತೆ ಪ್ರತಿಭಟನೆಯಲ್ಲಿ ತೊಡಗಿದ್ದರು. ಬೆಂಗಳೂರು ಕಾಲೇಜು ವಿದ್ಯಾರ್ಥಿನಿ, ಭರತನಾಟ್ಯ ಪ್ರವೀಣೆ ಭಾರ್ಗವಿಯೂ ಕೂಡ 12.50 ಲಕ್ಷದ ಪ್ರಶ್ನೆಗೆ ಉತ್ತರಿಸಲಾರದೆ, ಸ್ಪರ್ಧೆಯಿಂದ ಹಿಂದೆಸರಿದಳು.
ಈ ಮಧ್ಯೆ ಸ್ಟಾರ್ ಟಿ.ವಿ ಕೂಡ ಕೇಬಲ್ ಆಪರೇಟರ್ಗಳ ವಿರುದ್ಧ ತನ್ನ ಎಫ್ಎಂ ಚಾನೆಲ್ನಲ್ಲಿ ಜಾಹೀರಾತು ಯುದ್ಧ ಸಾರಿದೆ. ಈ ಮಧ್ಯೆ, ತಮ್ಮ ಈ ಹೋರಾಟಕ್ಕೆ ಸಮಸ್ತ ಬೆಂಗಳೂರಿಗರೂ ಬೆಂಬಲ ನೀಡಿದ್ದಾರೆ. ಈ ತಿಂಗಳ ಕೊನೆಯಲ್ಲಿ ನಮ್ಮ ಎಲ್ಲ ಗ್ರಾಹಕರೂ ಕೇಬಲ್ ಬಾಡಿಗೆ ಹಣವನ್ನು ಪೂರ್ತಿ ನೀಡುತ್ತಾರೆ ಎನ್ನುತ್ತಾರೆ ಆಪರೇಟರ್ಗಳು. ಈ ಯುದ್ಧದಲ್ಲಿ ಸ್ಟಾರ್ ಸೋಲತ್ತೋ, ಕೇಬಲ್ ಆಪರೇಟರ್ಗಳು ಸೋಲುತ್ತಾರೋ ಇಲ್ಲ ಪ್ರೇಕ್ಷಕರು ಸೊರಗುತ್ತಾರೋ ಕಾದು ನೋಡಬೇಕು.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...