‘ಅಮೆರಿಕಾ ನೊಗಕ್ಕೆ ಹೆಗಲು ತೋರಿ, ಬೀದಿ ಮಾರಿಯ ಕರೆದ ಭಾರತ’
ಬೆಂಗಳೂರು : ಆತುರಗಾರನಿಗೆ ಬುದ್ಧಿ ಮಟ್ಟ ಅನ್ನೋದು ಪ್ರಸ್ತುತ ಭಾರತಕ್ಕೆ ಅನ್ವಯಿಸುತ್ತದೆ. ನ್ಯೂಯಾರ್ಕ್ ಮತ್ತು ವಾಷಿಂಗ್ಟನ್ ಮೇಲಿನ ನಡೆದ ದಾಳಿಗೆ ಪ್ರತಿದಾಳಿಗಾಗಿ ಅಮೆರಿಕಾ ಸಜ್ಜಾದೊಡನೆಯೇ, ಭಾರತ ಅದಕ್ಕೆ ಬೆಂಬಲಿಸುವುದಾಗಿ ಹೇಳಿ ತೊಂದರೆಗಳನ್ನು ಮೈಮೇಲೆ ಎಳೆದುಕೊಂಡಿದೆ ಎಂದು ಭಾರತದ ಮಾಜಿ ವಿದೇಶಾಂಗ ಕಾರ್ಯದರ್ಶಿ ಎ.ಪಿ.ವೆಂಕಟೇಶ್ವರನ್ ಅಭಿಪ್ರಾಯ ಪಟ್ಟಿದ್ದಾರೆ.
ಅಮೆರಿಕಾ ಕೇಳುವ ಮುಂಚೆಯೇ ಭಾರತ ಅಭಯ ಹಸ್ತ ಚಾಚುವ ಅವಶ್ಯಕತೆಯಾದರೂ ಏನಿತ್ತು? ತನ್ನ ಹಿತಾಸಕ್ತಿ ಬಗ್ಗೆ ಹಿಂದೂಮುಂದೂ ಯೋಚಿಸದೆ ಕೈಗೊಂಡ ಆತುರದ ನಿರ್ಧಾರ ಇದು ಎಂದು ವೆಂಕಟೇಶ್ವರನ್ ಭಾರತ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಹಿಂದೆ ಚೀನಾದಲ್ಲಿ ಭಾರತದ ರಾಯಭಾರಿಯಾಗಿಯೂ ಸೇವೆ ಸಲ್ಲಿಸಿರುವ ವೆಂಕಟೇಶ್ವರನ್ ಸಿಟಿಜನ್ ಫೋರಮ್ ಶನಿವಾರ ಆಯೋಜಿಸಿದ್ದ ಸಮಾರಂಭವೊಂದರಲ್ಲಿ ‘ಅಮೆರಿಕಾದಲ್ಲಿನ ಇತ್ತೀಚಿನ ಬೆಳವಣಿಗೆಗಳು- ಭಾರತದ ಮುಂದಿನ ಹೆಜ್ಜೆಗಳು ಇಂತಿರಬೇಕು’ ಎಂಬ ವಿಷಯ ಕುರಿತು ಮಾತಾಡುತ್ತಿದ್ದರು.
ಅಮೆರಿಕಾ ನಮಗೇನು ಮಾಡಿದೆ?
ಭಾರತದಲ್ಲಿ ಉಗ್ರರು ನಿದ್ದೆ ಕದಿಯುತ್ತಿದ್ದಾರೆ ಅನ್ನೋದನ್ನ ಎರಡೂ ಕಿವಿಗಳಲ್ಲಿ ಕೇಳಿ, ಬಿಟ್ಟಿತೇ ವಿನಃ ಅದಕ್ಕೆ ಸ್ಪಂದಿಸಲಿಲ್ಲ. ಪಾಕಿಸ್ತಾನ ತನ್ನ ನೆಲದಲ್ಲಿ ನಡೆಸುತ್ತಿರುವ ಭಯೋತ್ಪಾದನೆಗೆ ಭಾರತ ಲಿಖಿತ ಪುರಾವೆ ಒದಗಿಸಿದರೂ, ಅಮೆರಿಕಾ ಮುಗುಮ್ಮಾಗೇ ಇತ್ತು. ಭಾರತದಲ್ಲಿ 12 ಕೋಟಿ ಮುಸಲ್ಮಾನರಿದ್ದಾರೆ. ಜಗತ್ತಿನ ಯಾವುದೇ ಮೂಲೆಯಲ್ಲಾಗಲೀ ‘ಜೆಹಾದ್’ಗೆ ಕರೆ ನೀಡಿದರೆ, ಈ ಮುಸಲ್ಮಾನರ ಪೈಕಿ ಹಲವರಾದರೂ ಸ್ಫೋಟಿಸುವ ಆತಂಕವಿದೆ ಎಂದರು.
ಬಾಲಂಗೋಚಿ : ಬಹುಶಃ ವೆಂಕಟೇಶ್ವರನ್ ಬೆಂಗಳೂರಲ್ಲಿ ಕೂಗಾಡಿದ್ದು ಅಮೆರಿಕಾ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಕಿವಿಗೆ ಬಿದ್ದಿದೆ. ಈ ಕಾರಣಕ್ಕೇ ಜಮ್ಮು- ಕಾಶ್ಮೀರ ಭಯೋತ್ಪಾದನೆ ನಿರ್ಮೂಲನೆ ಮಾಡುವುದಾಗಿಯೂ ಅಮೆರಿಕ ಘೋಷಿಸಿರಬಹುದೆ ?
(ಪಿಟಿಐ)