ಸೆಪ್ಟೆಂಬರ್ ಅಂತ್ಯಕ್ಕೆ ತಮಿಳುನಾಡಿಗೆ 15 ಟಿಎಂಸಿ ನೀರು : ಎಚ್ಕೆ ಪಾಟೀಲ್
ನವದೆಹಲಿ : ಸೆಪ್ಟೆಂಬರ್ ಅಂತ್ಯದ ಹೊತ್ತಿಗೆ ಮೆಟ್ಟೂರು ಜಲಾಶಯಕ್ಕೆ 15 ಟಿಎಂಸಿ ನೀರು ಬಿಡುವುದಾಗಿ ಕೇಂದ್ರ ಜಲ ಸಂಪನ್ಮೂಲ ಖಾತೆ ಸಚಿವ ಅರ್ಜುನ್ಚರಣ್ ಸೇಠಿ ಅವರಿಗೆ ಕರ್ನಾಟಕ ಸರ್ಕಾರ ಭರವಸೆ ಕೊಟ್ಟಿದೆ.
ಶನಿವಾರ ಸಂಜೆ ಸಚಿವ ಸೇಠಿ ಅವರನ್ನು ಭೇಟಿ ಮಾಡಿದ ಕರ್ನಾಟಕದ ಭಾರೀ ನೀರಾವರಿ ಸಚಿವ ಎಚ್.ಕೆ.ಪಾಟೀಲ್ ಈ ಭರವಸೆ ನೀಡಿದರು. ಶನಿವಾರ ನಡೆಯಬೇಕಿದ್ದ ಕಾವೇರಿ ಪ್ರಾಧಿಕಾರದ ಸಭೆ ರದ್ದಾದ ಕಾರಣ ಎಚ್.ಕೆ.ಪಾಟೀಲ್, ಕೇಂದ್ರ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಇತ್ತೀಚೆಗೆ ನಡೆದ ಕಾವೇರಿ ಪ್ರಾಧಿಕಾರದ ಉಸ್ತುವಾರಿ ಸಮಿತಿ ಸಭೆಯಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ತಮಿಳುನಾಡಿಗೆ ಕನಿಷ್ಠ 15 ಟಿಎಂಸಿ ನೀರನ್ನಾದರೂ ಬಿಡುವಂತೆ ಕಾರ್ಯದರ್ಶಿ ಬಿ.ಎನ್.ನವಾಲಾವಾಲಾ ಸೂಚಿಸಿದ್ದರು. ಕರ್ನಾಟಕದಲ್ಲಿ ಕಳೆದ ಹಲವು ದಿನಗಳಿಂದ ಮಳೆಯಾಗುತ್ತಿದೆ. ಈ ತಿಂಗಳ ಮೂರೇ ದಿನಗಳಲ್ಲಿ (19, 20 ಮತ್ತು 21ರಂದು) ಒಟ್ಟು 4.91 ಟಿಎಂಸಿ ನೀರನ್ನು ಕರ್ನಾಟಕ ತಮಿಳುನಾಡಿಗೆ ಬಿಟ್ಟಿದೆ. ಇದೇ ರೀತಿಯಲ್ಲಿ ನೀರು ಬಿಟ್ಟರೆ ತಮಿಳುನಾಡಿಗೆ ಹರಿಸುವ ನೀರಿನ ಪ್ರಮಾಣ 25 ಟಿಎಂಸಿಯಷ್ಟಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಸಚಿವರಿಗೆ ಪಾಟೀಲ್ ತಿಳಿಸಿದರು.
ಮೆಟ್ಟೂರು ಜಲಾಶಯದಲ್ಲಿ ಈಗ 12 ಟಿಎಂಸಿ ನೀರು ಇದ್ದು, ಕುರುವೈ ಬೆಳೆಗೆ ಹಾನಿಯಾಗದು. ಕರ್ನಾಟಕದಿಂದಲೂ ನಾವು ಭರವಸೆ ಕೊಟ್ಟಿರುವಷ್ಟು ನೀರು ಹರಿಸುತ್ತೇವೆ. ಇದರಿಂದ ಸಮಸ್ಯೆಗೆ ಸದ್ಯಕ್ಕೆ ತೆರೆಬೀಳಲಿದೆ ಎಂದರು.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...